ಆರ್ಥಿಕ ಬಿಕ್ಕಟ್ಟಿನ ಎಚ್ಚರಿಕೆ ಗಂಟೆ ಬಾರಿಸಿದ ಇನ್ಫಿ ಸಿಇಓ
ಪ್ರಸ್ತುತ ಜಾಗತಿಕ ಆರ್ಥಿಕ ಸ್ಥಿತಿಗತಿ ಎರಡು ವರ್ಷಗಳ ಹಿಂದಿನಂತೆ ಇದ್ದು, ಅನಿಶ್ಚಿತತೆಯಿಂದ ಕೂಡಿದ್ದು ಅನಿರೀಕ್ಷಿತ ವಿದ್ಯಮಾನಗಳು ಸಂಭವಿಸಬಹುದು. ಪ್ರತಿ ವಾರ, ಪ್ರತಿ ತಿಂಗಳು ಆರ್ಥಿಕ ವಲಯದಲ್ಲಿ ಅನೇಕ ಸವಾಲುಗಳು ಎದುರಾಗುತ್ತಿವೆ. ಯುರೋಪ್ ರಾಷ್ಟ್ರಗಳಲ್ಲಿ ಪರಿಸ್ಥಿತಿ ತೀರ ಆತಂಕಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಒಂದು ಬ್ಯಾಂಕ್ ಮುಚ್ಚಿದರೂ ಸಾಕು ಯಾವುದೇ ದೇಶದ ಆರ್ಥಿಕ ಸ್ಥಿರತೆಯನ್ನು ಅಲ್ಲಾಡಿಸಿಬಿಡುತ್ತದೆ. ಹಿಂದಿನ ಆರ್ಥಿಕ ಮುಗ್ಗಟ್ಟು ವ್ಯಾಪಾರಕ್ಕೆ ಭಾರೀ ಧಕ್ಕೆ ಉಂಟುಮಾಡಿದ್ದರೆ, ಈಗ ಸಂಭವಿಸಬಹುದಾದ ಬಿಕ್ಕಟ್ಟು ಇಡೀ ರಾಷ್ಟ್ರವನ್ನೇ ಅತಂತ್ರವನ್ನಾಗಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಗತಿಕವಾಗಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕೂಡ ಗೋಪಾಲಕೃಷ್ಣನ್ ಆತಂಕ ವ್ಯಕ್ತಪಡಿಸಿದ್ದಾರೆ. ಯುಕೆಯಲ್ಲಿ ಉದ್ಭವಿಸಿರುವ ನಿರುದ್ಯೋಗದಿಂದಾಗಿ ಸರಕಾರ ಭಾರತದಿಂದ ಬರುವ ನಿಪುಣ ಕಾರ್ಮಿಕರ ವೀಸಾ ದರವನ್ನು ಹೆಚ್ಚಿಸಬೇಕಾಯಿತು ಎಂದು ತಿಳಿಸಿದ್ದಾರೆ. ನಿನ್ನೆ ತಾನೆ ಯಾಹೂ ಕಂಪನಿ ಸುಮಾರು 600 ನೌಕರರನ್ನು ಮನೆಗೆ ಕಳಿಸುವುದಾಗಿ ಹೇಳಿದ್ದು ಒಂದು ಉದಾಹರಣೆಯಷ್ಟೆ.