ವೀರಶೈವ ಪರ ಹೇಳಿಕೆ- ಎಚ್ಡಿಕೆ ಮೊಸಳೆ ಕಣ್ಣೀರು
ಇಂದು ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ರಾಜ್ಯಕಾರ್ಯದರ್ಶಿ ಹೆಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಕುಮಾರಸ್ವಾಮಿ ವೀರಶೈವ ಜನಾಂಗದ ಬಗ್ಗೆ ಮೊಸಳೆ ಕಣ್ಣೀರಿನ ಹೇಳಿಕೆ ನೀಡಿರುವುದಕ್ಕೆ ವಿರೋಧವಿದೆ. ವೀರಶೈವ ಧರ್ಮ ಜೆಡಿಎಸ್-ಕಾಂಗ್ರೆಸ್-ಬಿಜೆಪಿಗೆ ಸೀಮಿತವಲ್ಲ. ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕ್ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ವೀರಶೈವ ಜನಾಂಗವನ್ನು ಮರುಳು ಮಾಡಿ, ವೀರಶೈವರ ಮತ ಪಡೆಯುವ ಹುನ್ನಾರದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದರು.
ಇವರ ಈ ನಡವಳಿಕೆ ನೀತಿಸಂಹಿತೆಯ ಉಲ್ಲಂಘನೆಯಾಗಿದ್ದು, ಕೂಡಲೇ ಚುನಾವಣಾ ಆಯೋಗ ಜೆಡಿಎಸ್ನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಇಂತಹ ಹೇಳಿಕೆಗಳಿಗೆ ಸಮಾಜಬಾಂಧವರು ಮರುಳಾಗುವುದಿಲ್ಲ ಎಂಬುದನ್ನು ಕುಮಾರಸ್ವಾಮಿಯವರು ಅರಿತುಕೊಳ್ಳಬೇಕು. ಈ ಹಿಂದೆ ಸಿದ್ದರಾಮಯ್ಯ ಮತ್ತು ಎಂ.ಪಿ.ಪ್ರಕಾಶ್ರವರಿಗೂ ಮುಖ್ಯಮಂತ್ರಿ ಮಾಡುವುದಾಗಿ ನಂಬಿಸಿ ಈ ಹಿಂದೆ ಜೆಡಿಎಸ್ನ ರಾಷ್ಟ್ರಾಧ್ಯಕ್ಷ ದೇವೇಗೌಡ ದ್ರೋಹ ಮಾಡಿದ್ದರು.
ಈಗ ಚುನಾವಣೆಯ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಗೆ ಜಾತಿಯ ಬಗ್ಗೆ ಅನುಕಂಪ ಮೂಡಿದ್ದು, ಈ ರೀತಿ ಯಾವ ಪಕ್ಷದವರೂ ಮಾಡಬಾರದು. ಯಾವ ಪಕ್ಷದ ಮುಖಂಡರೂ ಇಂಥ ಬೇಜವಾಬ್ದಾರಿ ಹೇಳಿಕೆ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಸ್ವಾಮಿಗಳು ಈ ಹಿಂದೆ ಮುಖ್ಯಮಂತ್ರಿಯ ಪರ ಪ್ರತಿಭಟನೆ ನಡೆಸಿದ್ದರಲ್ಲಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸ್ವಾಮಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಅವರು ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡಲಿ. ರಾಜಕೀಯದಲ್ಲಿ ಸ್ವಾಮೀಜಿಗಳಿಗೆ ಆಸಕ್ತಿಯಿದ್ದಲ್ಲಿ ಕಾವಿ ಬಟ್ಟೆಯನ್ನು ಕಳಚಿ, ಖಾದಿ ಬಟ್ಟೆಯನ್ನು ಹಾಕಿಕೊಳ್ಳಲಿ. ಸ್ವಾಮೀಜಿಯಾಗಿ ಯಾರು ಬೇಕಾದರೂ ಆಗಬಹುದು. ಸ್ವಾಮೀಜಿಗಳಿಗಿಂತ ಭಕ್ತರೇ ದೊಡ್ಡವರು. ಭಕ್ತರೇ ಇಲ್ಲದಿದ್ದರೆ ಸ್ವಾಮೀಜಿ ಎಲ್ಲಿರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಸಮಾಜದ ಮುಖಂಡ ರುದ್ರೇಶ್, ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಉಪಸ್ಥಿತರಿದ್ದರು.