ಬಂಗಾರಪ್ಪ ಪಕ್ಷಾಂತರ ಬಿಜೆಪಿಗೇ ಒಳ್ಳೆಯದು : ಆಯನೂರು

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಂಗಾರಪ್ಪ ಜೆಡಿಎಸ್ಗೆ ಸೇರ್ಪಡೆಯಾದರೆ ನಮಗೇನು ತೊಂದರೆ ಇಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಆಗುತ್ತದೆ. ಅಪ್ಪ ಮಕ್ಕಳು ಒಂದಾಗಿದ್ದರೆ ಸೊರಬ, ಸಾಗರ ಮತ್ತು ಹೊಸನಗರ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಒಂದಿಷ್ಟು ಬಲ ಬರುತ್ತಿತ್ತೇನೋ. ಈ ಹಿಂದೆ ಭದ್ರಾವತಿ ಹೊರತುಪಡಿಸಿ ಜೆಡಿಎಸ್ ಯಾವ ತಾಲ್ಲೂಕಿನಲ್ಲೂ ಅಸ್ತಿತ್ವದಲ್ಲಿರಲಿಲ್ಲ. ಏನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರವಾದ ಪೈಪೋಟಿ ಇರುತ್ತಿತ್ತು. ಈಗ ಬಂಗಾರಪ್ಪರವರು ಜೆಡಿಎಸ್ ಸೇರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಬಂಗಾರಪ್ಪ ಜೆಡಿಎಸ್ಗೆ ಬಂದಿದ್ದಾರೆ ಎಂದು ಜೆಡಿಎಸ್ನ ನಾಯಕರುಗಳು ಹೇಳಿಕೊಳ್ಳಬಹುದು ಅಷ್ಟೆ ಎಂದು ಲೇವಡಿ ಮಾಡಿದರು.
ಕುಮಾರ ಬಂಗಾರಪ್ಪ ಬಿಜೆಪಿ ಸೇರಿರುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆಲ್ಲಾ ಎಂಬ ಪ್ರಶ್ನೆಗೆ, ಕುಮಾರ ಬಂಗಾರಪ್ಪ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಯಾವ ಹಂತದಲ್ಲೂ ಈ ವಿಚಾರ ಕುರಿತಾಗಿ ಸಮಾಲೋಚನೆ ನಡೆದಿಲ್ಲ ಎಂಬ ಉತ್ತರ ನೀಡಿದರು.
ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿಯವರು ಹಣದ ಪ್ರಭಾವವನ್ನು ಬಳಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ, ಸೋಲಿಗೆ ವಿರೋಧ ಪಕ್ಷದವರು ಈಗಾಗಲೇ ಮಾನಸಿಕವಾಗಿ ತಯಾರಾಗುತ್ತಿದ್ದಾರೆ. ಹೀಗಾಗಿಯೇ ಈ ರೀತಿಯಾದ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದು, ಹಣ ಹಂಚುತ್ತಾರೆ ಎಂಬ ಹೇಳಿಕೆಯನ್ನು ನೀಡಿರುವುದು ಸರಿಯಲ್ಲ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.












Click it and Unblock the Notifications