ಸಿಎಂ-ಪದ್ಮರಾಜ್ ಸಂಬಂಧ ಶೀಘ್ರ ಬಹಿರಂಗ: ಉಗ್ರಪ್ಪ
ಬುಧವಾರ ಹರಿಹರದಲ್ಲಿ ನಡೆದ ಗ್ರಾಮೀಣ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ಹೇಳಿದರು. ಭೂ ಹಗರಣಗಳ ಬಗ್ಗೆ ಕಾಂಗ್ರೆಸ್ ನೀಡಿರುವ ದೂರುಗಳನ್ನು ಲೋಕಾಯುಕ್ತರೇ ತನಿಖೆ ನಡೆಸಬೇಕು. ಈ ತನಿಖೆಯನ್ನು ನ್ಯಾ. ಪದ್ಮರಾಜ್ ನಡೆಸಬಾರದು ಎಂದು ಆಗ್ರಹಿಸಿದರು.
ಹಗರಣಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ನ್ಯಾಯಾಂಗ ತನಿಖೆ ನಾಟಕ ನಡೆಸಿದ್ದಾರೆ. ಜಿಲ್ಲಾ ಪಂಚಾಯತಿ, ತಾಲೂಕ್ ಪಂಚಾಯತಿ ಚುನಾವಣೆಗಳನ್ನು ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಹಣ ಹಾಗೂ ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಮೂಲಕ ಹೆಚ್ಚು ಸ್ಥಾನ ಗಳಿಸುತ್ತಾರೆ ಎಂದರು.
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಗಡ್ಕರಿ ಅವರು ಮುಖ್ಯಮಂತ್ರಿಗಳ ಬೆನ್ನು ಚಪ್ಪರಿಸಿ ತೆರಳಿರುವುದು ದುರಂತ. ಈಶ್ವರಪ್ಪ ಅವರಂತೂ ರಾಜ್ಯಪಾಲ, ಲೋಕಾಯುಕ್ತರಿಗೂ ಗೌರವ ಕೊಡುವುದನ್ನು ಮರೆತಿದ್ದಾರೆ. ಹಗರಣಗಳಿಂದ ರಾಜ್ಯ ಮುಕ್ತವಾಗಿ ಜನತೆಗೆ ನ್ಯಾಯ ಸಿಗುವವರೆಗೂ ಕೆಪಿಸಿಸಿ ಹೋರಾಟ ನಡೆಸಲಿದೆ ಎಂದು ಉಗ್ರಪ್ಪ ಹೇಳಿದರು.