ಕುಕ್ಕೆ ಮಡೆಸ್ನಾನ ವಿರುದ್ಧ ಮೈಸೂರಲ್ಲಿ ಕಹಳೆ

ಬ್ರಾಹ್ಮಣರ ಎಂಜಲಿನ ಮೇಲೆ ಶೂದ್ರರ ಉರುಳು ಸೇವೆಯನ್ನು ಖಂಡಿಸಿ ಮತ್ತು ಈ ಅನಿಷ್ಟ ಪದ್ಧತಿಯ ಆಚರಣೆಯನ್ನು ಕಾನೂನುಬದ್ಧವಾಗಿ ನಿಷೇಧಿಸುವಂತೆ ಆಗ್ರಹಿಸಿ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಮುಂದೆ ಡಿ.10 ಮತ್ತು 11 ರಂದು ಪತಿಭಟನೆ ನಡೆಸಲಾಗುವುದು ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡ ಕೆ ಶಿವರಾಮು ಹೇಳಿದ್ದಾರೆ.
ಈ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು, ಇಲ್ಲಿ ಇನ್ನೂ 'ಮಡೆಸ್ನಾನ" ಊರ್ಜಿತದಲ್ಲಿರುವುದು ದುರಂತ. ಅಧಿಕಾರಿಗಳ ಸಮ್ಮುಖದಲ್ಲೇ ನಡೆಯುವಂತಹ ಈ ಅನಿಷ್ಠ ಪದತಿಗೆ ಕೊನೆಗಾಣಿಸಬೇಕು. ಕೆಳವರ್ಗವನ್ನು ಮೇಲ್ವರ್ಗದವರು ತುಳಿಯುವಂತಹ ಇಂಥ ಪದ್ಧತಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿರುವ ಒಕ್ಕೂಟವು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮನವಿಯೊಂದನ್ನು ಸಲ್ಲಿಸಿದೆ.
ಪೇಜಾವರಶ್ರೀ ವಿರುದ್ಧ ಪ್ರೊ. ಜಿಕೆ ವಾಗ್ದಾಳಿ: "ದಲಿತರ ಕೇರಿಗಳಿಗೆ ಭೇಟಿ ನೀಡಿ ತಾನು ಅಸ್ಪೃಶ್ಯರ ಪರವಾಗಿದ್ದೇನೆ ಎಂದು ಸಾರುತ್ತಿರುವ ಪೇಜಾವರ ಸ್ವಾಮಿಗೆ, ಈ ಸಮಾಜದಲ್ಲಿ ದೇವರ ಹೆಸರಲ್ಲಿ ನಡೆಯುತ್ತಿರುವ ಮಡೆಸ್ನಾನದಂತಹ ದಲಿತರ ಮೇಲಿನ ದೌರ್ಜನ್ಯ ಕಾಣುವುದಿಲ್ಲವೇ?" ಎಂದು ಪ್ರಶ್ನಿಸಿದ ಸಾಮಾಜಿಕ ಕಾರ್ಯಕರ್ತ ಜಿ ಕೆ ಗೋವಿಂದ ರಾವ್, "ಇಂತಹ ಪದ್ಧತಿ ಮುಂದುವರಿಯಲು ಅವಕಾಶ ನೀಡುವುದು ಕ್ರಿಮಿನಲ್ ಪ್ರಕಿಯೆಯಾಗುತ್ತದೆ" ಎಂದಿದ್ದಾರೆ.
ಏನಿದು ಮಡೆಸ್ನಾನ?: ಕುಕ್ಕೆಯಲ್ಲಿ ನಡೆಯುವಂತಹ ಈ ಅನಿಷ್ಠ ಮತ್ತು ಜಾತೀಯ ನಿಂದನಾತ್ಮಕ ಪದ್ಧತಿಯ ವಿರುದ್ಧ ಅತ್ತ ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದಂತೆ ಇತ್ತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಿನ್ನೆ ಉರುಳು ಸೇವೆ ಅರ್ಥಾತ್ "ಮಡೆಸ್ನಾನ" ನಡೆದಿದೆ. ಷಷ್ಠಿ ಮತ್ತು ಪಂಚಮಿ ಅಂಗವಾಗಿ ಸೇವೆ ನಡೆದಿದೆ.
ವ್ರತಧಾರಿಗಳು ಇಲ್ಲಿನ ಕುಮಾರಧಾರ ನದಿಯಲ್ಲಿ ಮಿಂದು, ಇಲ್ಲಿನ ಮುಖ್ಯ ಬೀದಿಯಲ್ಲಿ ಉದ್ದಕ್ಕೆ ಉರುಳುತ್ತಾ ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುತ್ತಾರೆ. ಈ ಸೇವೆ ಬ್ರಾಹ್ಮಣರು ಊಟ ಮಾಡಿದ ಎಲೆಗಳ ರಾಶಿಯ ಮೇಲೂ ನಡೆಯುವುದುಂಟು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಾಹ್ಮಣರು ಉಂಡು ಬಿಸಾಡುವ ಎಂಜಲಿನ ಮೇಲೆ ಉರುಳು ಸೇವೆ ಮಾಡಿದರೆ, ಚರ್ಮರೋಗ ಗುಣವಾಗುತ್ತದೆ ಎಂಬುದಾಗಿ ಶೂದ್ರರಲ್ಲಿ ಅಜ್ಞಾನವನ್ನು ಬಿತ್ತಲಾಗಿದೆ. ಮೂಢನಂಬಿಕೆ ಮೂಲಕ ಜನರನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಇದಾಗಿದೆ ಎಂದು ದಲಿತ ಮುಖಂಡರು ಟೀಕಿಸಿದ್ದಾರೆ.












Click it and Unblock the Notifications