ಶಿವಮೊಗ್ಗ ಡಿವಿಎಸ್ ಕಾಲೇಜಿನಲ್ಲಿ ಎಲ್ಲವೂ ಸರಿಯಿಲ್ಲ
ಡಿವಿಎಸ್ ಸ್ವತಂತ್ರ ಕಾಲೇಜಿನ ಗಣಿತ ಉಪನ್ಯಾಸಕ ರಾಜಶೇಖರ್ ಇತ್ತೀಚೆಗೆ ನಡೆದ ಕೌನ್ಸಿಲ್ ಸಭೆಗೆ ಹಾಜರಾಗಿರಲಿಲ್ಲ. ಅಂತೆಯೇ, ಪ್ರೌಢಶಾಲೆಯ ಶಿಕ್ಷಕ ಲಕ್ಷ್ಮಣ್ರವರು ಮುದ್ರಣ ವಿಭಾಗದಲ್ಲಿ ನಷ್ಟ ಉಂಟುಮಾಡಿದ್ದರು ಎಂಬ ಕಾರಣಗಳನ್ನಿಟ್ಟುಕೊಂಡು ಈ ಇಬ್ಬರನ್ನು ಕಾಲೇಜಿನ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಎಂ.ಎಲ್. ವೈಶಾಲಿರವರು ಅಮಾನತು ಮಾಡಿದ್ದರು.
ಅಮಾನತು ಆದೇಶದಿಂದ ರೊಚ್ಚಿಗೆದ್ದ ಕಾಲೇಜಿನ ವಿದ್ಯಾರ್ಥಿಗಳು ಕೂಡಲೇ ಅಮಾನತು ಆದೇಶವನ್ನು ಹಿಂಪಡೆದು, ಶಿಕ್ಷಕರುಗಳು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯುಂಟಾಗುತ್ತದೆ. ಪಾಠ-ಪ್ರವಚನಗಳು ಸರಾಗವಾಗಿ ನಡೆಯಲು ಅಡ್ಡಿಯುಂಟಾಗುತ್ತದೆ. ಅಲ್ಲದೇ, ಉತ್ತಮ ಶಿಕ್ಷಕರಾಗಿರುವ ಇವರನ್ನು ಅಮಾನತು ಮಾಡಿರುವ ಕ್ರಮ ಸರಿಯಲ್ಲವೆಂದು ಆರೋಪಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಿನ್ಸಿಪಾಲರು ಕಾಲೇಜಿಗೆ ರಜೆ ಘೋಷಿಸಿದರು. ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಶುಕ್ರವಾರದಂದು ನಡೆಸಲಾಗುವುದೆಂದು ತಿಳಿಸಿದರು. ಕಾರ್ಯನಿಮಿತ್ತ ಬೇರೆಡೆಗೆ ತೆರಳಿದ್ದ ಆಡಳಿತಾಧಿಕಾರಿ ವೈಶಾಲಿರವರು ಪ್ರತಿಭಟನಾ ಸ್ಥಳಕ್ಕೆ ಬಂದಿರಲಿಲ್ಲ. ಸ್ಥಳಕ್ಕೆ ಆಗಮಿಸಿ ಅಮಾನತು ಆದೇಶವನ್ನು ಹಿಂಪಡೆದಿರುವುದನ್ನು ಆಡಳಿತಾಧಿಕಾರಿಗಳು ತಿಳಿಸಬೇಕೆಂದು ಒತ್ತಾಯಿಸಿದ ವಿದ್ಯಾರ್ಥಿಗಳು ನಾಳೆ ಕೂಡ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.