ಮಡಿಕೇರಿಯಲ್ಲಿ ಮೇಜರ್ ಎಂಸಿ ಮುತ್ತಣ್ಣ ಪುತ್ಥಳಿ ಸ್ಥಾಪನೆ

MC Muthanna, Madikeri
ದೇಶಕ್ಕಾಗಿ ಪ್ರಾಣವ ತ್ಯಾಗ ಮಾಡಿದ ವೀರಯೋಧನಿಗೆ ಮಡಿಕೇರಿಯ ವೃತ್ತವೊಂದರಲ್ಲಿ 9 ಲಕ್ಷ ರು. ವೆಚ್ಚದಲ್ಲಿ ಪ್ರತಿಮೆ ಸ್ಥಾಪಿಸಿ, ಆ ಮೂಲಕ ಪ್ರತಿನಿತ್ಯ ನಮನ ಸಲ್ಲಿಸಲು ಅವಕಾಶ ಮಾಡಿಕೊಡುವ ಕಾರ್ಯಕ್ಕೆ ಎಂ.ಸಿ ಮುತ್ತಣ್ಣ ಮೆಮೋರಿಯಲ್ ಟ್ರಸ್ಟ್, ಕಾವೇರಿ ಸೇನೆಯ ಪದಾಧಿಕಾರಿಗಳು ಮುಂದಾಗಿದ್ದಾರೆ. ಪ್ರತಿಮೆಯ ಅನಾವರಣ ಡಿ.9ರಂದು ನಡೆಯುತ್ತಿದೆ. ಕನ್ನಡ ಮಣ್ಣಿನ ವೀರ ಯೋಧನಿಗೆ ಒಂದು ಭಾವಪೂರ್ಣ ಸಲಾಂ.

ಪ್ರಾಣತ್ಯಾಗ : ಅದು 2000ರ ಜನವರಿ 12, ಸಂಜೆ 6.15. ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾನ್ ಬಾಲ್ ಸೇನಾ ಕೇಂದ್ರ. ಈ ಕೇಂದ್ರಕ್ಕೆ ಉಗ್ರರು ನುಸುಳಿದ್ದರು. ಈ ಉಗ್ರರ ದಮನ ಮಾಡಲೆಂದೇ ಸೇನೆ ಒಳನುಗ್ಗಿತು. ಇದರ ನೇತೃತ್ವ ವಹಿಸಿದ್ದವರು ಮಂಗೇರಿರ ಚಿಣ್ಣಪ್ಪ ಮುತ್ತಣ್ಣ.

ಸೇನಾ ಕಾಂಪ್ಲೆಕ್ಸ್ ನ ಒಳಕ್ಕೆ ನುಗ್ಗಿ ಉಗ್ರರ ದಮನಕ್ಕೆ ಗುಂಡು ಹಾರಿಸಲು ಸೈನಿಕರು ರೈಫಲ್‌ಧಾರಿಗಳಾಗಿಯೇ ಇದ್ದರು. ಆದರೆ ಒಳ ನುಗ್ಗುತ್ತಲೇ ಉಗ್ರರು ಇವರ ಮೇಲೆ ದಾಳಿ ನಡೆಸಿಯೇ ಬಿಟ್ಟರು. ಇದರಿಂದ ಸೇನಾಕಾರಿಯೊಬ್ಬರು ಉಗ್ರರ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡರು. ರಕ್ತಸ್ರಾವದಿಂದ ಪ್ರಜ್ಞಾಶೂನ್ಯರಾಗಿದ್ದ ಅವರನ್ನು ಬದುಕಿಸಲು ಇನ್ನಿಲ್ಲದ ಶ್ರಮ ವಹಿಸುತ್ತಲೇ ಮುತ್ತಣ್ಣ ಉಗ್ರರ ಮೇಲೆ ದಾಳಿ ನಡೆಸತೊಡಗಿದರು. ಈ ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರನನ್ನು ಕೊಂದು ಮತ್ತೊಬ್ಬನನ್ನು ಗಾಯಗೊಳಿಸಿದರು. ಉಗ್ರರ ದವಡೆಯಿಂದ ನಾಲ್ವರನ್ನು ಪಾರು ಮಾಡಿದರು. ಅಷ್ಟರಲ್ಲಿಯೇ ಉಗ್ರರ ಗುಂಡು ಮುತ್ತಣ್ಣನವರಿಗೆ ತಾಗೇ ಬಿಟ್ಟಿತು. ತೀವ್ರ ಗಾಯಗಳಿಂದ ಅಸು ನೀಗಿದರು 36 ವರ್ಷದ ಮುತ್ತಣ್ಣ. ತಮ್ಮ ದೇಶಕ್ಕೆ ಪ್ರಾಣವನ್ನು ತ್ಯಾಗ ಮಾಡಿದರು.

ಕೊಡಗಿನಲ್ಲಿ ಜನನ : ಮೇಜರ್ ಎನ್.ಸಿ.ಮುತ್ತಣ್ಣ 1964ರ ಏಪ್ರಿಲ್ 21ರಂದು ಭಾಗಮಂಡಲ ಬಳಿಯ ಚೆಟ್ಟಿಮಾನಿ ಎಂಬಲ್ಲಿ ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಡೆಯಿತು. ಪ್ರೌಢಶಿಕ್ಷಣ ನಡೆದದ್ದು ಬೆಂಗಳೂರಿನಲ್ಲಿ. 1984ರಲ್ಲಿ ಬೆಂಗಳೂರಿನ ಸಂತ ಜೋಸೆಫ್ ರ ಕಾಲೇಜಿನಲ್ಲಿ ಬಿಎ ಪದವಿಯನ್ನು ಮುತ್ತಣ್ಣ ಪಡೆದರು. ಅದೇ ವರ್ಷ ಚೆನ್ನೈನಲ್ಲಿ ಓಟಿಎಯಲ್ಲಿ ಸೇರ್ಪಡೆಯಾದರು. 1985 ಅಕ್ಟೋಬರ್ 24ರಂದು ಸಿಖ್ ಸೇನಾ ತುಕಡಿಯ 5ನೇ ಬೆಟಾಲಿಯನ್ ಗೆ ಆಯ್ಕೆಯಾದರು.

ವಿವಿಧೆಡೆ ಸೇವೆ : ತಮ್ಮ 15 ವರ್ಷ ಸೇವಾ ಅವಧಿಯಲ್ಲಿ 2ನೇ ಲೆಫ್ಟಿನೆಂಟ್‌ನಿಂದ ಮೇಜರ್ ಹುದ್ದೆಗೆ ಬಡ್ತಿ ಪಡೆದರು. ಇವರು ಜಮ್ಮುಕಾಶ್ಮೀರ (1985-91), ಪಂಜಾಬ್ (1991-93), ಅರುಣಾಚಲ ಪ್ರದೇಶ(1993-96), ಬೆಂಗಳೂರು (1997-99), ಜಮ್ಮು ಕಾಶ್ಮೀರ(1999-2000) ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಜನೆವರಿ 12, 2000ರಂದು ಹುತಾತ್ಮರಾದಾಗ ಅನಂತನಾಗ್ ಜಿಲ್ಲೆಯ ಖಾನ್ ಬಾಲ್ ನಲ್ಲಿ ರಾಷ್ಟ್ರೀಯ ರೈಫಲ್ ಎಚ್.ಕ್ಯೂ. ಸೆಕ್ಟರ್1ರಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಪ್ರಶಸ್ತಿ ಮತ್ತು ಗೌರವ : ಇವರ ಶೌರ್ಯಕ್ಕೆ ಮೆಚ್ಚಿ ಶೌರ್ಯಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ. ಅಲ್ಲದೆ ಇವರು ತಮ್ಮ ನಾಳಿನ ಭವಿಷ್ಯಕ್ಕಾಗಿ ತಮ್ಮ ಇಂದಿನ ಬದುಕನ್ನು ತ್ಯಾಗ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ವೀರ ಯೋಧನನ್ನು ಗೌರವಿಸಿ ಭಾರತೀಯ ಸೇನಾ ಖಾನ್ ಬಾಲ್ ನಲ್ಲಿರುವ ಸೇನಾ ಶಾಲೆಗೆ ಎಂ.ಸಿ ಮುತ್ತಣ್ಣ ಅವರ ಹೆಸರನ್ನು ಇಡಲಾಗಿದೆ. ಜೊತೆಗೆ ಅಲ್ಲಿಯ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅವರ ತವರು ನೆಲವಾದ ಮಡಿಕೇರಿ ನಗರದ ಪುರಭವನದ ಬಳಿ ವೃತ್ತವೊಂದಕ್ಕೆ ಮುತ್ತಣ್ಣ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಅಲ್ಲದೆ, ಡಿ.9ರಂದು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮುತ್ತಣ್ಣ ಅವರ ಆಳೆತ್ತರದ ಪ್ರತಿಮೆಯನ್ನು ಮಡಿಕೇರಿ ಪುರಭವನದ ವೃತ್ತದಲ್ಲಿ ಅನಾವರಣಗೊಳಿಸಲಾಗುವುದು. ಆ ಮೂಲಕ ದೇಶಕ್ಕಾಗಿ ತನ್ನ ಪ್ರಾಣವನ್ನು ಸಮರ್ಪಿಸಿದ ವೀರ ಯೋಧನಿಗೆ ಪ್ರತಿನಿತ್ಯ ನಮನ ಸಲ್ಲಿಸಲು ಎಂ.ಸಿ ಮುತ್ತಣ್ಣ ಮೆಮೋರಿಯಲ್ ಟ್ರಸ್ಟ್, ಕಾವೇರಿ ಸೇನೆಯ ಪದಾಧಿಕಾರಿಗಳು ಅವಕಾಶ ಮಾಡಿಕೊಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+