ಸಿಎಂ ಕಾರ್ಯದರ್ಶಿ ಮನೆ ಮೇಲೆ ಜೆಡಿಎಸ್ ದಾಳಿ
ಮಂಗಳವಾರ (ನ.30) ರಾತ್ರಿ ಸುಮಾರು 10 .20ರ ಸುಮಾರಿಗೆ ಈ ಘಟನೆ ನಡೆದಿದೆ. ಖಾಸಾಗಿ ವಾಹಿನಿಯಲ್ಲಿ ಕುಮಾರಸ್ವಾಮಿ ಮತ್ತು ಪುಟ್ಟಸ್ವಾಮಿ ನಡುವೆ ನಡೆದ ಕೀಳುಮಟ್ಟದ ಮಾತಿನ ಚಕಮಕಿಯ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ. ಭೂ ಹಗರಣದ ವಿಷಯದಲ್ಲಿ ನಡೆದ ಚರ್ಚೆಯ ಸಮಯದಲ್ಲಿ "ನೀವು ನಿಮ್ಮ ವಂಶಸ್ಥರಿಗೆ ಹುಟ್ಟಿದ್ದೇ ಆದರೆ ರಾಜಕೀಯದಿಂದ ನಿವೃತ್ತಿಯಾಗಿ, ನಾನು ನನ್ನ ವಂಶಸ್ಥರಿಗೆ ಹುಟ್ಟಿದ್ದೇ ಆದಲ್ಲಿ ನಾನು ನನ್ನ ಈ ಹುದ್ದೆಗೆ ರಾಜೀನಾಮೆ ನೀಡುತ್ತೇನೆ" ಎಂದು ಪುಟ್ಟಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ನೀವು "ಪಾಪರ್ ಚೀಟಿ" ಆಗಿದ್ದೀರಿ ಎನ್ನುವ ಎಚ್ ಡಿ ಕೆ ಮಾತಿನಿಂದ ಕೆರಳಿ ಪುಟ್ಟಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
ರಾಜಕೀಯದಲ್ಲಿ ವೈಯಕ್ತಿಕ ದ್ವೇಷ ಸಾಧನೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಜೆಡಿಎಸ್ ಮುಖಂಡರು ಈ ರೀತಿ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ. ಮನೆ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲೆತ್ನಿಸಿದರು. ಅಂಗರಕ್ಷಕರ ನೆರವಿನಿಂದಾಗಿ ನಾನು ಪ್ರಾಣಾಪಾಯದಿಂದ ಪಾರಾದೆ ಎಂದು ಪುಟ್ಟಸ್ವಾಮಿ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಪಕ್ಷದ ಪರವಾಗಿ ಜೈಕಾರ ಹಾಕುತ್ತಿದ್ದ ಕಿಡಿಗೇಡಿಗಳು ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಲೆತ್ನಿಸಿದರು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಅವರಲ್ಲಿ ಕೆಲವರನ್ನು ಬಂಧಿಸಲಾಯಿತು. ಘಟನೆ ಸಂಬಂಧ 24 ಜನರನ್ನು ಬಂಧಿಸಲಾಗಿದೆ. ಬಂಧಿತರು ಜೆಡಿಎಸ್ ಕಾರ್ಯಕರ್ತರೆಂದು ವಿಚಾರಣೆ ವೇಳೆ ತಿಳಿಸಿದರೆಂದು ಪೊಲೀಸರು ವಿವರ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಪ್ತಚರ ದಳದ ಐಜಿಪಿ ಗೋಪಾಲ್ ಬಿ.ಹೊಸೂರ್ 'ಈ ಕೃತ್ಯ ಎಸಗಿರುವ ಎಲ್ಲ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗುತ್ತದೆ" ಎಂದು ಹೇಳಿದ್ದಾರೆ. ಗೃಹ ಸಚಿವ ಆರ್ ಅಶೋಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.