ಸಿಎಂ ಮಕ್ಕಳು, ಸಂಬಂಧಿಕರು ಮನೆಯಿಂದ ಹೊರಗೆ

ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ಸರಕಾರಿ ನಿವಾಸದಿಂದ ಇಂದು ಮಗ ಬಿ ವೈ ವಿಜಯೇಂದ್ರ, ಮಗಳು ಉಮಾದೇವಿ ಮತ್ತು ಅಳಿಯ ಸೋಹನ್ ಕುಮಾರ್ ಅವರಿಗೆ ಮನೆ ಖಾಲಿ ಮಾಡಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿದೆ. ಮುಖ್ಯಮಂತ್ರಿಗಳ ಆದೇಶದಂತೆ ಸರಕಾರಿ ನಿವಾಸದಲ್ಲಿರುವ ಅವರ ಎಲ್ಲ ಸಂಬಂಧಿಕರಿಗೆ ಮನೆ ಖಾಲಿ ಮಾಡಲು ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಕ್ಕಳು, ಸಂಬಂಧಿಕರು ಆಡಳಿತ ವಿಚಾರದಲ್ಲಿ ತಲೆಹಾಕಬಾರದು ಎನ್ನುವ ಬಿಜೆಪಿ ಹೈಕಮಾಂಡ್ ನ ಪ್ರಥಮ ಷರತ್ತನ್ನು ಯಡಿಯೂರಪ್ಪ ಈಡೇರಿಸಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಂಡು ಬಂದ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ನಾನು ತಪ್ಪು ಮಾಡಲ್ಲ. ಮಕ್ಕಳು, ಸಂಬಂಧಿಕರು ಹಾಗೂ ಸ್ವಾರ್ಥಿಗಳ ಗುಂಪಿನಿಂದ ದೂರ ಇರುತ್ತೇನೆ ಎಂದಿದ್ದರು. ಈಗ ಹೇಳಿಕೆ ನೀಡಿದಂತೆ ನಡೆದುಕೊಂಡಿದ್ದಾರೆ.
ಸರಕಾರಿ ಭೂಮಿಯನ್ನು ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಮಕ್ಕಳು ಹಾಗೂ ಸಂಬಂಧಿಕರಿಗೆ ಹೆಸರಿಗೆ ನೋಂದಾಯಿಸುವ ಮೂಲಕ ಸ್ವಪಕ್ಷಪಪಾತ ನಡೆಸಿರುವ ಬಹುದೊಡ್ಡ ಆರೋಪ ಯಡಿಯೂರಪ್ಪ ಅವರ ಮೇಲಿತ್ತು. ಇದನ್ನೇ ಅಸ್ತ್ರವಾಗಿ ಕೈಗೆತ್ತಿಕೊಂಡಿದ್ದ ಪ್ರತಿಪಕ್ಷಗಳು ಯಡಿಯೂರಪ್ಪ ಅವರನ್ನು ವಜಾಗೊಳಿಸಲು ಯತ್ನಿಸಿದ್ದವು. ವರಿಷ್ಠರೂ ಕೂಡೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸಮ್ಮತಿಸಿದ್ದವು. ಆದರೆ, ಯಡಿಯೂರಪ್ಪ ಕುರ್ಚಿ ಅಂಟಿಕೊಂಟಿದ್ದರಿಂದ ಅವರಿಗೆ ಇನ್ನೊಂದು ಷರತ್ತುಬದ್ಧ ಜೀವದಾನ ನೀಡಿದೆ.
ಬಾಕಿ ಇರುವ ಷರತ್ತುಗಳು : ಪಾರದರ್ಶಕ ಆಡಳಿತ ನೀಡಬೇಕು ಹಾಗೂ ಪಕ್ಷದ ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಎರಡು ಷರತ್ತು ಯಡಿಯೂರಪ್ಪ ಅಧಿಕಾರದಲ್ಲಿರುವವರೆಗೂ ಕಾಯ್ದುಕೊಂಡು ಹೋಗಬೇಕಿದೆ.












Click it and Unblock the Notifications