ಭ್ರಷ್ಟರಿಗೆ ಮಠಾಧೀಶರ ಬೆಂಬಲ ಸಲ್ಲ : ರೆಡ್ಡಿ

ಯಾವುದೇ ಜಾತಿಯ ರಾಜಕಾರಣಿಗೆ ತೊಂದರೆ ಆದಲ್ಲಿ ಆ ಜಾತಿಯ ಮಠಾಧೀಶರು ಬೀದಿಗಿಳಿದು ಹೋರಾಟ ಮಾಡುವ ಸಂಪ್ರದಾಯವೇ ಕೆಟ್ಟದು. ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಮಠಾಧೀಶರು ಭ್ರಷ್ಟ ವ್ಯವಸ್ಥೆಗೆ ಸಂಪೂರ್ಣ ಬೆಂಬಲ ನೀಡಿದ್ದು ಅವರಲ್ಲಿಯ ನೈಜತೆಯನ್ನು ತಿಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕ್ಷೇತ್ರದಲ್ಲಿ ಇರುವವರು ಪ್ರಾಮಾಣಿಕತೆ ಮತ್ತು ಸನ್ಮಾರ್ಗದಿಂದ ಬದುಕನ್ನು ನಡೆಸುತ್ತಾರೋ ಅಂಥಹವರು ಯಾರಿಗೂ ಹೆದರುವ ಅಗತ್ಯವೇ ಇಲ್ಲ. ಪ್ರಾಮಾಣಿಕರು, ಸನ್ಮಾರ್ಗಿಗಳು ಯಾವುದೇ ಕೋಮಿನಲ್ಲಿ ಇದ್ದರೂ ಅವರಿಗೆ ತೊಂದರೆ ಆದಲ್ಲಿ ಸ್ಪಂದಿಸಬೇಕು. ಆದರೆ, ರಾಜಕೀಯಕ್ಕೆ ಇಳಿಯಬಾರದು ಎಂದು ವ್ಯಂಗ್ಯವಾಗಿ ಹೇಳಿದರು.
ಬಹಳಷ್ಟು ಸತ್ಯ, ನಿಷ್ಠೆ ಉಳ್ಳವರು ಮಾತ್ರ ಅಧಿಕಾರದಲ್ಲಿ ಇರಲಿ, ಮುಂದುವರೆಯಲಿ. ಇಲ್ಲವಾದಲ್ಲಿ ಪದತ್ಯಾಗ ಮಾಡಿ ಹೋಗಲಿ. ಆದರೆ, ಸ್ವಜನ ಪಕ್ಷಪಾತ, ಸ್ವಜನ ಹಿತ, ಭ್ರಷ್ಟಾಚಾರ ನಡೆಸುವವರು ಅಧಿಕಾರದಲ್ಲಿ ಇರಬಾರದು ಎಂದು ಅವರು, ಸಿಎಂ ಬಿಎಸ್ ವೈ ಅವರನ್ನೇ ಕೇಂದ್ರವಾಗಿಸಿಕೊಂಡು ಮಾತನಾಡಿದರು.
ಮೇಲ್ಜಾತಿ, ಕೆಳಜಾತಿ ಎಂಬ ಭೇದಭಾವ ತೊಲಗಿಸಲು ಕನಕದಾಸರ ಕೀರ್ತನೆಗಳನ್ನು ಹಳ್ಳಿಹಳ್ಳಿಗೆ ತಲುಪಿಸಿ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯಲು ನಾವೆಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು. ಲಿಂಗಾಯಿತ, ಕುರುಬ, ನಾಯಕ ಸಮುದಾಯದಲ್ಲಿ ಉತ್ತಮ ಗುಣ, ನಡತೆ ಉಳ್ಳವರನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದರು.
ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಅಧಿಕಾರ ಒಬ್ಬರಿಂದ ಒಬ್ಬರಿಗೆ, ಒಂದು ಕೋಮಿನಿಂದ ಮತ್ತೊಂದು ಕೋಮಿನವರಿಗೆ ಹಸ್ತಾಂತರ ಆಗುತ್ತದೆ. ಅಧಿಕಾರವನ್ನು ಬಿಟ್ಟು ಹೋಗುವ ಸ್ಥಿತಿ ಎಲ್ಲರಿಗೂ ಬರಲಿದೆ. ಅಧಿಕಾರವನ್ನು ಬಿಡುವಾಗ ಹಸನ್ಮುಖಿಗಳಾಗೇ ಹಸ್ತಾಂತರ ಮಾಡಬೇಕು ಎಂದು ಹೇಳಿದರು.
ಆರೋಗ್ಯ ಸಚಿವ ಬಿ. ಶ್ರೀರಾಮುಲು, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ, ನಿರಾಶ್ರಿತರ ಪುನರ್ವಸತಿ ಕೇಂದ್ರದ ರಾಜ್ಯಾಧ್ಯಕ್ಷ ಕೆ.ಎ. ರಾಮಲಿಂಗಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎನ್. ರುದ್ರಗೌಡ, ಉಪಾಧ್ಯಕ್ಷೆ ಮಂಜಮ್ಮ, ಉಪಮೇಯರ್ ತೂರ್ಪುಯಲ್ಲಪ್ಪ, ಕೆ.ಎಂ. ಹಾಲಪ್ಪ, ಜಿಲ್ಲಾಧಿಕಾರಿ ಬಿ. ಶಿವಪ್ಪ, ಬೆಣಕಲ್ ಬಸವರಾಜ ಗೌಡ, ಕಲ್ಲುಕಂಬ ಪಂಪಾಪತಿ, ಉಪನ್ಯಾಸಕ ಮಾನಕರಿ ಶ್ರೀನಿವಾಸಚಾರ್ಯ ಇನ್ನಿತರರು ಉಪಸ್ಥಿತರಿದ್ದರು. ಏಳುಬೆಂಚೆ ಡಿ. ಕುಮಾರದಾಸ ಅವರು ದಾಸರ ಕೀರ್ತನೆ ಹಾಡಿದರು. ದೊಡ್ಡ ಬಸವಾರ್ಯ ಗವಾಯಿ ಹಾರ್ಮೋನಿಯಂ ಸಾಥ್ ನೀಡಿದರು.












Click it and Unblock the Notifications