ಭೂಮಿ ನುಂಗಣ್ಣರ ಪಟ್ಟಿಗೆ ಈಶ್ವರಪ್ಪ ಸೇರ್ಪಡೆ

ಬಿಜೆಪಿ ಸರಕಾರದ ಹಗರಣಗಳ ಸರಮಾಲೆ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಯಡಿಯೂರಪ್ಪ ಕುಟುಂಬದ ಭೂ ಹಗರಣ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆಯೇ ಈಶ್ವರಪ್ಪ, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಬೆಂಗಳೂರು, ನೆಲಮಂಗಲ ಹಾಗೂ ಬಳ್ಳಾರಿಯಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಕೈಗಾರಿಕೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ.
ಭೂಮಿ ಪಡೆಯುವಲ್ಲಿ ಪೈಪೋಟಿ : ಯಡಿಯೂರಪ್ಪ ಕುಟುಂಬದ ಜತೆ ಪೈಪೋಟಿಗೆ ಬಿದ್ದವರಂತೆ ಕೆಐಎಡಿಬಿಯಿಂದ ಭೂಮಿ ಮಂಜೂರು ಮಾಡಿಸಿಕೊಳ್ಳಲಾಗಿದೆ. ಪೀಣ್ಯ ಕೈಗಾರಿಕೆ ಪ್ರದೇಶದ 4ನೇ ಘಟ್ಟದಲ್ಲಿ 7,682 ಚದರಡಿ ವಿಸ್ತೀರ್ಣದ ಎರಡು ಶೆಡ್ಗಳನ್ನು ಈಶ್ವರಪ್ಪ ಪುತ್ರ ಕೆಇ ಕಾಂತೇಶ್ ಅವರಿಗೆ ಮಂಜೂರು ಮಾಡಿಸಲಾಗಿದೆ. ಇದಕ್ಕಾಗಿ 93.05 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ.
ಈ ಅವಧಿಯಲ್ಲಿ ಈಶ್ವರಪ್ಪ ಇಂಧನ ಖಾತೆ ಸಚಿವರಾಗಿದ್ದರು ಎಂಬುದು ವಿಶೇಷ. ಈಶ್ವರಪ್ಪ ಕುಟುಂಬದ ಭಾರತ್ ಇಂಡಸ್ಟ್ರೀಸ್ ಕಂಪನಿ, 2009ರ ಜನವರಿ 6ರಂದು ಅಸ್ತಿತ್ವಕ್ಕೆ ಬಂದಿದೆ. ಈ ಕಂಪನಿಯಲ್ಲಿ ಈಶ್ವರಪ್ಪ , ಪತ್ನಿ ಕೆ.ಜಯಲಕ್ಷ್ಮಿ, ಪುತ್ರ ಕಾಂತೇಶ್ ಹಾಗೂ ಸೊಸೆ ಆರ್.ಶಾಲಿನಿ ಪಾಲುದಾರರು. ಕಂಪನಿಯು 2009ರ ಜನವರಿ 12ರಂದು ಕೆಐಎಡಿಬಿಗೆ ಭೂಮಿಗಾಗಿ ಅರ್ಜಿ ಹಾಕಿಕೊಂಡಿದೆ. ನೆಲಮಂಗಲ ಬಳಿಯ ದಾಬಸ್ಪೇಟೆ ಸೋಮಪುರ ಕೈಗಾರಿಕೆ ಪ್ರದೇಶದಲ್ಲಿ ಎರಡು ಎಕರೆ ಜಮೀನು ಮಂಜೂರಾಗಿದೆ.
ಅಚ್ಚರಿ ಅಂದರೆ, ಕಂಪನಿ ಅರ್ಜಿ ಹಾಕಿಕೊಂಡ 24 ದಿನದೊಳಗೆ ಭೂಮಿ ಮಂಜೂರು ಆಗಿದ್ದು, ಅಧಿಕಾರ ದುರುಪಯೋಗ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಈಶ್ವರಪ್ಪ ತಮ್ಮ ಅಳಿಯನಿಗೂ ಭೂದಾನ ಕೊಡಿಸಿದ್ದಾರೆ. ಬಿಎಚ್ ನಿರ್ಮಲಕುಮಾರ್ ಮಾಲೀಕತ್ವದ ವಿಷ್ಣು ಪ್ರಿಯಾ ಎಂಟರ್ ಪ್ರೈಸಸ್ ಕಂಪನಿಗೆ ಬಳ್ಳಾರಿ ಜಿಲ್ಲೆಯ ಕುಡತಿನಿ ಯಲ್ಲಿ 11.21 ಎಕರೆ ಭೂಮಿಯನ್ನು ಕೆಐಎಡಿಬಿ ಯಿಂದ ಮಂಜೂರು ಮಾಡಿಸಿಕೊಟ್ಟಿದ್ದಾರೆ. 9.75 ಕೋಟಿ ರೂ. ವೆಚ್ಚದಲ್ಲಿ ಸ್ಪಾಂಜ್ ಐರನ್ ಘಟಕ ಆರಂಭಿಸುವ ಉದ್ದೇಶ ತೋರಿಸಿ ಭೂಮಿ ಮಂಜೂರು ಮಾಡಿಸಿಕೊಳ್ಳಲಾಗಿದೆ.












Click it and Unblock the Notifications