ಉಸ್ತುವಾರಿ ಪೀಕಲಾಟ : ಗದಗ ಬಂದ್ ಯಶಸ್ವಿ
ಮೆರವಣಿಗೆಯ ವೇಳೆ ಕೆಲ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು, ಆಟೋಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಐವರು ಅಭಿಮಾನಿಗಳು ಬ್ಲೇಡ್ನಿಂದ ಕೈ ಕುಯ್ದುಕೊಂಡರು. ಸರಕಾರ ಇರುವವರೆಗೂ ಶ್ರೀರಾಮುಲು ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುತ್ತಾರೆ ಎಂದು ಮುಖ್ಯಮಂತ್ರಿ ಗದಗ ಜಿಲ್ಲೆಗೆ ಆಗಮಿಸಿದ್ದಾಗ ಮಾತು ಕೊಟ್ಟಿದ್ದರು. ಆದರೆ ಆ ಮಾತು ಮೀರುವ ಮೂಲಕ ಯಡಿಯೂರಪ್ಪ ವಚನಭ್ರಷ್ಟರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಶ್ರೀರಾಮುಲು ಅಭಿಮಾನಿಗಳು, ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮುಳಗುಂದ ನಾಕಾ ಬಳಿ ಪ್ರತಿಭಟನಾಕಾರರ ಮೆರವಣಿಗೆ ತಲುಪುತ್ತಿದ್ದಂತೆಯೇ ಕೆಲಕಿಡಿಗೇಡಿಗಳು ಆಟೊಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.
ಐವರು ಬ್ಲೇಡ್ ನಿಂದ ಕೈಕೊಯ್ದುಕೊಂಡು ಶ್ರೀರಾಮುಲು ಪರ ಅಭಿಮಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಶ್ರೀರಾಮುಲು ಅಭಿಮಾನಿಗಳು, ಸಚಿವ ಶ್ರೀರಾಮುಲು ಅವರನ್ನೇ ಗದಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಂದುವರಿಸಬೇಕು. ಸಿಎಂ ತಮ್ಮ ನಿಲುವು ಬದಲಾಯಿಸುವವರೆಗೂ ನಿರಂತರ ಉಪವಾಸ ನಿರಶನ ಹಮ್ಮಿಕೊಳ್ಳುವುದಾಗಿ ತಿಳಿಸಿದರು.