ಬೆಳಗಾವಿ ವೈದ್ಯನಿಂದ ತಂದೆಯ ದೇಹ ಛೇದನ!
ಬೈಲಹೊಂಗದ ದಿ.ಡಾ.ಬಿ.ಎಸ್.ರಾಮಣ್ಣ ತಮ್ಮ ದೇಹವನ್ನು ವೈದ್ಯಕೀಯ ಅಧ್ಯಯನಕ್ಕೆಂದು ದಾನ ಮಾಡಿದ್ದರು. ಈಗ ಅವರ ದೇಹವನ್ನು ಅವರ ಮಗ ಡಾ.ಮಹಾಂತೇಶ್ ಛೇದನ ಮಾಡಲಿದ್ದಾರೆ. ವೈದ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶರೀರ ರಚನೆಯ ಬಗ್ಗೆ ಪಾಠ ಮಾಡಲಿದ್ದಾರೆ ಡಾ.ಮಹಾಂತೇಶ್.
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಡಾ.ಮಹಾಂತೇಶ್ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾನವ ಶರೀರದ ಪರಿಚಯ ಇರಬೇಕು ಎಂದು ಅವರ ತಂದೆ ಡಾ.ರಾಮಣ್ಣ ಪ್ರತಿಪಾದಿಸುತ್ತಿದ್ದರು.
ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅವರ ಮಗನಿಂದಲೇ ಡಾ.ರಾಮಣ್ಣ ಅವರ ದೇಹಕ್ಕೆ ವೈದ್ಯಕೀಯ ಸ್ಪರ್ಶ ಸಿಗಲಿದೆ. ತಂದೆಯ ದೇಹವನ್ನೇ ಛೇದಿಸುವುದು ಕಷ್ಟದ ಕೆಲಸ. ಹಾಗಿದ್ದೂ ತಮ್ಮ ಎಲ್ಲಾ ಮಾನಸಿಕ ಹೊಯ್ದಾಟಗಳಿಂದ ಹೊರಬಂದಿರುವ ಮಹಾಂತೇಶ್ ತಂದೆಯ ದೇಹವನ್ನು ಛೇದಿಸಲು ಸಿದ್ಧವಾಗಿದ್ದಾರೆ.
ಶನಿವಾರ (ನ.13) ಮಧ್ಯಾಹ್ನ 3.15ಕ್ಕೆ ಡಾ.ರಾಮಣ್ಣ ಅವರ ದೇಹ ಛೇದನ ನಡೆಯಲಿದೆ.ಈ ಸಂದರ್ಭದಲ್ಲಿ ಮಹಾಂತೇಶ್ ಅವರ ತಾಯಿ, ಪತ್ನಿ ಉಪಸ್ಥಿತರಿರುತ್ತಾರೆ. ದೇಹದಾನ ಮತ್ತು ಛೇದನ ವೈದ್ಯ ವಿಜ್ಞಾನಕ್ಕೆ ಹೊಸದಲ್ಲ. ಆದರೆ ಸ್ವತಃ ಮಗನೇ ತಂದೆಯ ದೇಹ ಛೇದನ ಮಾಡುತ್ತಿರುವುದು ಜಗತ್ತಿನಲ್ಲೇ ಪ್ರಥಮ.
ನೇರ ಪ್ರಸಾರ: ಮಹಾಂತೇಶ್ ಅವರು ತಂದೆಯ ದೇಹವನ್ನು ಛೇದಿಸಿ ಪಾಠ ಮಾಡುವ ದೃಶ್ಯವನ್ನು ನೇರ ಪ್ರಸಾರ ಮಾಡಲು ನಾನಾ ಭಾಷೆಯ ಮಾಧ್ಯಮ ಪ್ರತಿನಿಧಿಗಳು ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬೀಡುಬಿಟ್ಟಿದ್ದಾರೆ. ಬಿಬಿಸಿ ತನ್ನ ಪ್ರತಿನಿಧಿಯನ್ನು ಕಳುಹಿಸಿಕೊಟ್ಟಿದೆ.