ಯಡಿಯೂರಪ್ಪ ಕಂಡರಿಯದ ಭ್ರಷ್ಟ ಸಿಎಂ : ಪರಮೇಶ್ವರ
ರಾಜರಾಜೇಶ್ವರಿ ನಗರದ ರಾಜೀವ್ ಗಾಂಧಿ ಯುವಕರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಸರಕಾರ ಹಗರಣದಲ್ಲಿ ಮುಳಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಭ್ರಷ್ಟ ಸರಕಾರವನ್ನು ಕಿತ್ತೊಗೆಯಲು ಯುವ ಪಡೆ ಮುಂದಾಗಬೇಕು ಎಂದರು.
ಎಲ್ಲ ಕಾಂಗ್ರೆಸಿಗರನ್ನು ಒಗ್ಗೂಡಿಸಿ ರಾಜ್ಯದಲ್ಲಿ ಪಕ್ಷ ಬಲಿಷ್ಠಗೊಳಿಸುವ ಕಾರ್ಯಕ್ಕೆ ಸಿದ್ದತೆ ನಡೆಸಿದ್ದು, ಯುವ ಶಕ್ತಿ ಕೈ ಜೋಡಿಸಬೇಕು ಎಂದು ಹೇಳಿದರು. ಕೆಪಿಸಿಸಿ ಹಿಂದುಳಿದ ವರ್ಗದ ಕಾರ್ಯದರ್ಶಿ ಎಂ. ರಾಜ್ಕುಮಾರ್ ಮಾತನಾಡಿದರು. ಗೌರವಾಧ್ಯಕ್ಷ ಪ್ರಸನ್ನ, ಅಧ್ಯಕ್ಷ ನಾಗೇಶ್, ಸದಸ್ಯರಾದ ದಯಾನಂದ್ ಅರುಣ್, ಮೋಹನ್, ಸುನೀಲ್, ನಂದೀಶ್ ಹಾಜರಿದ್ದರು.
ನೀರಿಗೆ ಹಾಹಾಕಾರ : ರಾಜ್ಯದೆಲ್ಲೆಡೆ ಭಾರಿ ಮಳೆಯಾಗುತ್ತಿದ್ದರೆ ಕೆಂಗೇರಿಯ ಜನ ಮಾತ್ರ ಕಾವೇರಿ ನೀರಿಗಾಗಿ ಪರಿತಪಿಸುವಂತಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ. ವಾರಕ್ಕೊಮ್ಮೆ ಕಾವೇರಿ ನೀರು ಬಿಡುತ್ತಿದ್ದು, ಅದಕ್ಕೂ ಸಹ ನಿರ್ದಿಷ್ಟ ಸಮಯವಿಲ್ಲ. ಮಧ್ಯರಾತ್ರಿಯೂ ನೀರಿಗಾಗಿ ಕಾಯುವ ಪರಿಸ್ಥಿತಿಯಿದೆ. ಈ ಬಗ್ಗೆ ಹಲವು ಬಾರಿ ಜಲಮಂಡಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಸರಿಯಾಗಿ ನೀರು ಬಾರದಿದ್ದರೂ ಬಿಲ್ ತಪ್ಪದೆ ಬರುತ್ತದೆ. ಈ ಬಗ್ಗೆ ಶಾಸಕಿ ಶೋಭಾ ಕರಂದ್ಲಾಜೆ ಅವರಿಗೆ ದೂರು ನೀಡೋಣ ಎಂದರೂ ಕೈಗೆ ಸಿಗುತ್ತಿಲ್ಲ. ಅವರ ಕ್ಷೇತ್ರದ ಕಚೇರಿಯು ಮುಚ್ಚಿದೆ ಎಂದು ಅಲವತ್ತುಕೊಂಡಿದ್ದಾರೆ.