ರಾಜ್ಯ ಕಾಂಗ್ರೆಸ್ಸಿಗೆ ಶಕ್ತಿ ತುಂಬುವರೆ ಜಿ ಪರಮೇಶ್ವರ್?

ವಿಧಾನಸಭೆ ಚುನಾವಣೆಗಳಲ್ಲಿನ ಹಿನ್ನಡೆ ಮತ್ತು ಆಪರೇಷನ್ ಕಮಲದಿಂದ ಜರ್ಜರಿತವಾಗಿರುವ ರಾಜ್ಯ ಕಾಂಗ್ರೆಸ್ಸಿನಲ್ಲಿ ಹೊಸ ಶಕ್ತಿ ತುಂಬುವ ಉದ್ದೇಶದಿಂದ ಸೋನಿಯಾ ಗಾಂಧಿ ಈ ಕ್ರಮ ಕೈಗೊಂಡಿರುವುದು ಸುಸ್ಪಷ್ಟ. ಎಚ್ಕೆ ಪಾಟೀಲ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ಹಿರಿಯ ನಾಯಕರ ಹೆಸರುಗಳು ಈ ಮಹತ್ವದ ಹುದ್ದೆಗೆ ಕೇಳಿಬಂದಿತ್ತು. ಕೊನೆಗೆ, ದಲಿತ ನಾಯಕ ಪರಮೇಶ್ವರ್ ಅವರಲ್ಲಿ ಸೋನಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ ಇಮೇಜ್ ಹೊಂದಿರುವ ಡಾ. ಜಿ ಪರಮೇಶ್ವರ್ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರು ಎಸ್ಎಮ್ ಕೃಷ್ಣ ಅವರ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಪರಮೇಶ್ವರ್ ಅವರು ಎಂದು ಕೆಪಿಸಿಸಿ ಅಧ್ಯಕ್ಷರಾಗಿ ಸ್ಥಾನಗ್ರಹಿಸುತ್ತಾರೆಂಬುದು ಇನ್ನೂ ತಿಳಿದುಬಂದಿಲ್ಲ. ಕಾರ್ಯಾಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ಅವರ ಅವಧಿಯೂ ಮುಗಿದಿದ್ದು, ಬೇರೆ ಯಾವ ನಾಯಕನನ್ನು ಕಾರ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿಲ್ಲ.
ಪ್ರದೇಶ ಕಾಂಗ್ರೆಸ್ಸಿಗೆ ಈ ಬದಲಾವಣೆ ಸದ್ಯದ ಅಗತ್ಯವಾಗಿತ್ತು. ಬಿಜೆಪಿ ಆಪರೇಷನ್ ಕಮಲ ನಡೆಸಿರುವ ಹಿನ್ನೆಲೆಯಲ್ಲಿ ದೇಶಪಾಂಡೆಯಾಗಲಿ ಅಥವಾ ಫ್ರಂಟ್ ಲೈನ್ ನಾಯಕರುಗಳಿಂದ ಪಕ್ಷದ ಶಾಸಕರನ್ನು ಹಿಡಿದಿಡಲು ಸಾಧ್ಯವಾಗಿರಲಿಲ್ಲ. 2008ರ ವಿಧಾನಸಭೆ ಚುನಾವಣೆ ಅಥವಾ ತದನಂತರ ನಡೆದ ಉಪಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. 23ನೇ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪರಮೇಶ್ವರ್ ಅವರ ನೇಮಕವನ್ನು ಎಲ್ಲ ಹಿರಿಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications