ಸಿಡಿ ರಾಜಕೀಯದ ವಿರುದ್ಧ ಯಡ್ಡಿ ಸಿಡಿಮಿಡಿ

ಜನರೇ ಆರಿಸಿರುವ ಸರಕಾರವನ್ನು ಬೀಳಿಸಲು ನಡೆಸಲಾಗುತ್ತಿರುವ ಪಿತೂರಿಯ ವಿರುದ್ಧ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲಾಗುವುದು ಎಂದು ಯಡಿಯೂರಪ್ಪ ಉಡುಪಿ ಜಿಲ್ಲೆಯ ಅಮಾಸೆಬೈಲಿನಲ್ಲಿ ಶನಿವಾರ ನುಡಿದರು. ಪ್ರಸ್ತುತ ಯಡಿಯೂರಪ್ಪನವರು ಶೋಭಾ ಕರಂದ್ಲಾಜೆ ಮತ್ತು ಮಗ ರಾಘವೇಂದ್ರ ಜೊತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ.
ಗೋವಾದಲ್ಲಿ ಬಿಜೆಪಿ ಶಾಸಕರನ್ನು ಹೈಜಾಕ್ ಮಾಡಿ ಇಟ್ಟುಕೊಂಡದ್ದು, ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸರಕಾರದ ವಿರುದ್ಧ ಮತ ಹಾಕಲು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಹಣದ ಆಮಿಷ ಒಡ್ಡಿದ್ದು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಅವರಿಗೆ ಬಿಜೆಪಿ ಹಣದ ಆಮಿಷ ಒಡ್ಡಿದ್ದಾರೆಂದು ತೋರುವ ವಿಡಿಯೋ ಚಿತ್ರೀಕರಣ ಮಾಡಿರುವ ಘಟನೆಗಳ ತನಿಖೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ಸದ್ಯಕ್ಕೆ ಬಿಜೆಪಿ ಶಾಸಕರ ಅನರ್ಹತೆ ಕುರಿತು ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಕಾನೂನು ತಜ್ಞರೊಡನೆ ಚರ್ಚಿಸಿ ವಿಚಾರಣೆ ಮುಗಿದ ನಂತರ ತನಿಖೆ ಕೈಗೊಳ್ಳಲಾಗುವುದು. ಇದಕ್ಕೆ ಹೈಕೋರ್ಟಿನ ನಿವೃತ್ತಿ ನ್ಯಾಯಮೂರ್ತಿಗಳನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ನಕಲಿ ಸಾರ್ ನಕಲಿ : ಶುಕ್ರವಾರ ಸಂಜೆ ಕೊಲ್ಲೂರು ಮೂಕಾಂಬಿಕೆಗೆ ಶೋಭಾ ಕರಂದ್ಲಾಜೆ ಮತ್ತು ರಾಘವೇಂದ್ರ ಜೊತೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಡನೆ ಮಾಡನಾಡುತ್ತಿದ್ದ ಯಡಿಯೂರಪ್ಪನವರು ರಾಜ್ಯಪಾಲ ಭಾರದ್ವಾಜ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೀಡಿರುವ ಸಿಡಿ ನಕಲಿ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯನ್ನು ಸೇರಲು ಸುರೇಶ್ ಕುಮಾರ್ ಅವರಿಂದ ಗುಬ್ಬಿ ಶಾಸಕ ಶ್ರೀನಿವಾಸ್ ಅವರಿಗೆ ಒಡ್ಡಿದ್ದನ್ನು ತೋರಿಸುವ ವಿಡಿಯೋ ಕುಮಾರಸ್ವಾಮಿ ಅವರ ಕರಾಮತ್ತಿಗೆ ಹಿಡಿದ ಕನ್ನಡಿ ಎಂದು ಯಡಿಯೂರಪ್ಪನವರು ಲೇವಡಿ ಮಾಡಿದರು. ಸದ್ಯದಲ್ಲಿಯೇ ಸಿಡಿ ಅಸಲಿಯೋ ನಕಲಿಯೋ ಎಂಬ ಬಗ್ಗೆ ಸತ್ಯಾಂಶ ಹೊರಬೀಳಲಿದೆ ಎಂದು ನುಡಿದರು.
ಸಂಪುಟ ವಿಸ್ತರಣೆಯ ಬಗ್ಗೆ ಪ್ರಶ್ನಿಸಿದಾಗ, ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಇಲ್ಲಿ ತಾವು ದೇವಿಯ ದರ್ಶನಕ್ಕೆ ಬಂದಿದ್ದು, ಸಂಪುಟ ವಿಸ್ತರಣೆಗಿಂತ ರಾಜ್ಯದ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಹರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಭಿನ್ನಮತೀಯ ಶಾಸಕರು ಪಕ್ಷದ ಹಿರಿಯ ನಾಯಕರೊಂದಿಗೆ ಮಾತನಾಡುವ ಇಂಗಿತ ವ್ಯಕ್ತಪಡಿಸುವ ಬಗ್ಗೆ, ಅದು ಸದ್ಯಕ್ಕೆ ಮುಗಿದ ಅಧ್ಯಾಯ ಎಂದು ಮಾತುಕತೆಗೆ ಪೂರ್ಣವಿರಾಮ ಹಾಕಿದರು.
ಅಂದ ಹಾಗೆ ಇಂದು (ಅ. 23) ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಜನುಮದಿನ!
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7











Click it and Unblock the Notifications