ವರ್ತೂರು ಪ್ರಕಾಶ್ ಗೆ ಗೃಹ ಖಾತೆನೇ ಬೇಕಂತೆ!
ಸಚಿವ ಸ್ಥಾನ ನೀಡುವ ಭರವಸೆ ದೊರೆತ ಬಳಿಕವೇ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡ ಪ್ರಕಾಶ್, ಬೆಂಬಲ ಘೋಷಿಸಿದ ದಿನವೇ ತಾವು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಹಠ ಹಿಡಿದರು. ನಂತರ ವಿಶ್ವಾಸ ಮತ ಗೆದ್ದ ಮರುದಿನವೇ ತಮ್ಮ ಬಯಕೆ ಈಡೇರಿಸಬೇಕು ಎಂದು ಕುಳಿತರು. ಆದರೆ, ಇವೆರಡೂ ಆಗದಿದ್ದಾಗ ಅವರ ಹಠ ತಾರಕಕ್ಕೇರಿತು.
ಎರಡು ದಿನಗಳ ಹಿಂದೆ ರಾತ್ರಿ 9 ಗಂಟೆಯಲ್ಲಿ ತಮ್ಮನ್ನು ನಾಳೆಯೇ ಸಚಿವರನ್ನಾಗಿಸಬೇಕು ಎಂದು ಬಿಜೆಪಿಯ ನಾಯಕರ ಮುಂದೆ ರಚ್ಚೆ ಹಿಡಿದು ಕುಳಿತಿದ್ದರು. ಇದು ಸಾಧ್ಯವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟ ಬಳಿಕ ಅ.22 ರೊಳಗೆ ತಾವು ಸಚಿವರಾಗಬೇಕು ಎಂದು ಬಿಜೆಪಿ ಮುಖಂಡರಿಗೆ ಡೆಡ್ಲೈನ್ ವಿಧಿಸಿದ್ದಾರೆ.
22 ರ ಸಂಜೆಯೊಳಗೆ ಸಚಿವ ಸ್ಥಾನ ನೀಡದಿದ್ದರೆ ತಮ್ಮ ದಾರಿ ತಾವು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಸಚಿವ ಸ್ಥಾನ ಮಾತ್ರವಲ್ಲದೆ, ತಮಗೆ ಯಾವ ಖಾತೆ ನೀಡಬೇಕು ಎನ್ನುವ ಬಗ್ಗೆಯೂ ಪ್ರಕಾಶ್ ಹಠವಿದೆ. ಈಗ ಅಶೋಕ್ ಅವರ ಬಳಿ ಇರುವ ಸಾರಿಗೆ ಅಥವಾ ಗೃಹ - ಇವೆರಡು ಖಾತೆಗಳಲ್ಲಿ ಒಂದನ್ನು ತಮಗೆ ನೀಡಬೇಕೆನ್ನುವುದು ಅವರ ಆಗ್ರಹ.