ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಚೇಂಜಾದ್ರೆ ಬೆಂಬಲ ಕೋಡ್ತೀವಿ...

By Mrutyunjaya Kalmat
|
Google Oneindia Kannada News

ಬೆಂಗಳೂರು, ಅ. 20 : ಸ್ವಜನಪಕ್ಷಪಾತ, ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದ್ದ ಬೆಂಬಲವನ್ನು ಮಾತ್ರ ವಾಪಸ್ ಪಡೆಯಲಾಗಿದೆ. ಆದರೆ, ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಯಡಿಯೂರಪ್ಪ ಹೊರತುಪಡಿಸಿ ಯಾರೇ ಮುಖ್ಯಮಂತ್ರಿಯಾದರೂ ನಾವು ಬೆಂಬಲ ನೀಡಲು ಸಿದ್ಧ ಎಂದು ಅನರ್ಹಗೊಂಡ 11 ಮಂದಿ ಬಿಜೆಪಿ ಶಾಸಕರು ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.

ರಾಷ್ಟ್ರದ ಗಮನ ಸೆಳೆದಿರುವ ಬಿಜೆಪಿ ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ವಿ ಜಿ ಸಭಾಹಿತ್ ಅವರ ಏಕಸದಸ್ಯ ಪೀಠದೆದಿರು ಇಡೀ ದಿನ ವಾದ ಪ್ರತಿವಾದ ನಡೆಯಿತು. ವಿಚಾರಣೆ ಅಪೂರ್ಣಗೊಂಡಿದ್ದು, ನಾಳೆಯೂ ಇದರ ವಿಚಾರಣೆ ನಡೆಯಲಿದೆ.

ನಾವು ಈಗಲೂ ಬಿಜೆಪಿ ಪಕ್ಷದಲ್ಲೇ ಇದ್ದೇವೆ. ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಬಿಜೆಪಿಯಿಂದ ಹೊರಹೋಗಿ ಬೇರೆ ಪಕ್ಷಗಳೊಂದಿಗೆ ಕೈಜೋಡಿಸಿಲ್ಲ. ನಮ್ಮ ಅಸಮಾಧಾನವೇನಿದ್ದರೂ ನಾಯಕತ್ವದ ವಿರುದ್ಧ, ಬಿಜೆಪಿಯಲ್ಲಿ ಬೇರೆ ಯಾರೇ ಮುಖ್ಯಮಂತ್ರಿಯಾದರೂ ನಾವು ಬೆಂಬಲ ನೀಡಲು ಸಿದ್ಧ ಎಂದು 11 ಮಂದಿ ಬಿಜೆಪಿ ಅನರ್ಹ ಶಾಸಕರ ಪರ ಕೆಜಿ ರಾಘವನ್ ವಾದ ಮಂಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪೀಕರ್ ಅವರಿಗೆ ಬರೆದಿರುವ ಪತ್ರದಲ್ಲಿ 11 ಮಂದಿ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಉಲ್ಲೇಖಿಸಿಲ್ಲ. ರಾಜ್ಯಪಾಲರಿಗೆ ಪತ್ರ ನೀಡಿರುವ 11 ಮಂದಿ ಶಾಸಕರು ಬೆಂಬಲವನ್ನು ವಾಪಸ್ ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಅವರನ್ನು ಸಿಎಂ ಅವರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್ ಗೆ ಮನವಿ ಮಾಡಿಕೊಂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಿಲ್ಲ. ಇದರಿಂದಾಗಿ ಸ್ಪೀಕರ್ ಅವರು ಅದೇಶಿಸಿರುವಂತೆ ಪಕ್ಷಾಂತರ ಕಾಯ್ದೆ ಶೆಡ್ಯುಲ್ 10 ಅನುಚ್ಛೇದ ಕಲಂ 2(1) ಎ ಅಡಿ ಶಾಸಕರನ್ನು ಅನರ್ಹಗೊಳಿಸಲು ಬರುವುದಿಲ್ಲ ಎಂದು ರಾಘವನ್ ವಾದಿಸಿದರು.

ಏಕಸದಸ್ಯ ಪೀಠಕ್ಕೆ ವರ್ಗಾವಣೆ : ಪಕ್ಷವಿರೋಧಿ ಚಟುವಟಿಕೆಯಾಗಿ 11 ಬಿಜೆಪಿ ಶಾಸಕರನ್ನು ವಿಧಾನಸಭೆ ಸಭಾಧ್ಯಕ್ಷ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಹೂಡಲಾಗಿದ್ದ ರಿಟ್ ಅರ್ಜಿಯಲ್ಲಿ ತೀರ್ಪು ನೀಡಿದ್ದ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಮತ್ತು ನ್ಯಾ. ಎನ್ ಕುಮಾರ್ ಅವರು ವಿಭಿನ್ನ ತೀರ್ಪು ನೀಡಿದ್ದರು.

ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅವರು ಶಾಸಕರನ್ನು ಅನರ್ಹಗೊಳಿಸಿದ್ದನ್ನು ಮುಖ್ಯ ನ್ಯಾಯಮೂರ್ತಿ ಖೇಹರ್ ಎತ್ತಿಹಿಡಿದಿದ್ದರೆ, ಗುಲಬರ್ಗಾದ ಸರ್ಕಿಟ್ ಬೆಂಚಿಗೆ ವರ್ಗಾವಣೆಗೊಂಡಿರುವ ನ್ಯಾ. ಕುಮಾರ್ ಅವರು ಸಭಾಧ್ಯಕ್ಷ ಅವರ ಕ್ರಮ ತಪ್ಪು ಎಂದು ತೀರ್ಪನ್ನು ನೀಡಿದ್ದರು. ಈ ಕಾರಣದಿಂದಾಗಿ ಪ್ರಕರಣವನ್ನು ಮೂರನೇ ನ್ಯಾಯಮೂರ್ತಿಗೆ ವರ್ಗಾಯಿಸಲಾಗಿತ್ತು.

ಈ ಪ್ರಕರಣದಲ್ಲಿ ನಾಲ್ಕು ವಿಷಯಗಳನ್ನು ಚರ್ಚಿಸಲಾಗಿತ್ತು. ಅವು, ಸ್ವಾಭಾವಿಕ ನ್ಯಾಯ ಉಲ್ಲಂಘಿಸಲಾಗಿದೆಯೇ ಇಲ್ಲವೆ? ನಿಯಮ ಗಾಳಿಗೆ ತೂರಲಾಗಿದೆಯೇ ಇಲ್ಲವೆ? ಸಭಾಧ್ಯಕ್ಷ ನಿರ್ಣಯ ದುರುದ್ದೇಶದಿಂದ ಕೂಡಿದೆಯೆ ಇಲ್ಲವೆ? ಮತ್ತು ಭಿನ್ನಮತೀಯರು ಸ್ವಇಚ್ಛೆಯಿಂದ ಬಿಜೆಪಿ ಪಕ್ಷ ಬಿಟ್ಟು ಹೊರಹೋಗಿದ್ದಾರೆಯೆ ಇಲ್ಲವೆ? ಇವುಗಳಲ್ಲಿ ಮೊದಲ ಮೂರು ವಿಷಯಗಳಲ್ಲಿ ಇಬ್ಬರೂ ನ್ಯಾಯಮೂರ್ತಿಗಳು ಒಮ್ಮತ ಹೊಂದಿದ್ದರೆ, ನಾಲ್ಕನೇ ವಿಷಯದಲ್ಲಿ ಭಿನ್ನಮತ ಹೊಂದಿದ್ದರು. ಪ್ರಕರಣವನ್ನು ಮೂರನೇ ನ್ಯಾಯಮೂರ್ತಿಗೆ ವರ್ಗಾಯಿಸಿ ಅಕ್ಟೋಬರ್ 20ರಂದು ವಿಚಾರಣೆ ಮುಂದೂಡಲಾಗಿತ್ತು.

ಅನರ್ಹ ಶಾಸಕರ ಸುದ್ದಿಗೋಷ್ಠಿ : ನಮ್ಮನ್ನು ಯಾರೂ ಗೃಹಬಂಧನದಲ್ಲಿ ಇಟ್ಟಿಲ್ಲ. ಯಾರಿಗೂ ಹೆದರುವ ಜಾಯಮಾನ ನಮ್ಮದಲ್ಲ. ನಮ್ಮ ಬೇಡಿಕೆ ಒಂದೇ - ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕು. ಮುಖ್ಯಮಂತ್ರಿಗಳನ್ನು ಬದಲಾಯಿಸಿದರೆ, ಬಿಜೆಪಿ ಬೆಂಬಲ ಕೊಡುತ್ತೇವೆ. ಬಿಜೆಪಿ ಹೈಕಮಾಂಡ್ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಅತೃಪ್ತರ ನಾಯಕ್ತವ ವಹಿಸಿರುವ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ತೀರ್ಪು ಹೊರಬರುವವರೆಗೂ ನಾವು ರೆಸಾರ್ಟ್ ನಲ್ಲಿ ಇರುತ್ತೇವೆ. ಕಾನೂನು ಸಮರವನ್ನು ಮುಂದುವರೆಸುತ್ತೇವೆ. ನಮ್ಮ ವಿರುದ್ಧ ತೀರ್ಪು ಬಂದರೆ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಜಾರಕಿಹೊಳಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X