ಟೆಕ್ಕಿ ಹೆಂಡತಿಯ ಅತ್ಯಾಚಾರ ಮತ್ತು ಬರ್ಬರ ಹತ್ಯೆ
ತಮಿಳುನಾಡಿನ ತಿರುನೆಲ್ ವೇಲಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಯರಾಗಿದ್ದ ಮಲ್ಲಾರವಳ್ಳಿ ಎಂಬಾಕೆ ಎರಡು ತಿಂಗಳ ಹಿಂದಷ್ಟೇ ಸಾಫ್ಟ್ ವೇರ್ ಇಂಜಿನಿಯರ್ ಬಾಲ ಸುಬ್ರಮಣ್ಯಂ ಅವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಗಂಡ ಕೆಲಸಕ್ಕೆ ಹೋದಾಗ ಮಲ್ಲಾರವಳ್ಳಿಯ ಕತ್ತನ್ನು ಗ್ಲಾಸ್ ಪೀಸಿನಿಂದ ಸೀಳಿ ಹತ್ಯೆಗೈಯಲಾಗಿದೆ. ಅರೆನಗ್ನ ಸ್ಥಿತಿಯಲ್ಲಿದ್ದ ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾದ ಮೇಲೆ ಕೆಲಸ ತ್ಯಜಿಸಿದ್ದ ಮಲ್ಲಾರವಳ್ಳಿ ಮನೆಯಲ್ಲಿ ಒಂಟಿಯಾಗಿದ್ದರು. ಗಂಡ 9 ಗಂಟೆಗೆ ಕೆಲಸಕ್ಕೆ ತೆರಳಿದವರು ಸಂಜೆ 4.30 ಗಂಟೆಗೆ ಮೊಬೈಲಿಗೆ ಕರೆ ಮಾಡಿ ಮಲ್ಲಾರವಳ್ಳಿಯೊಂದಿಗೆ ಮಾತನಾಡಿದ್ದಾರೆ. ಆದರೆ, ಇನ್ನೊಂದು ಗಂಟೆಯ ನಂತರ ಮಾಡಿದ ಕರೆಗೆ ಆಕೆ ಉತ್ತರಿಸಿಲ್ಲ. ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸುಬ್ರಮಣ್ಯಂ ಎಂದಿನಂತೆ ಸಂಜೆ 6.30ಕ್ಕೆ ಮನೆಗೆ ಮರಳಿದ್ದಾರೆ.
ಮನೆ ಮುಂದಿನ ಕಬ್ಬಿಣದ ಗ್ರಿಲ್ ಮತ್ತು ಮುಂಬಾಗಿಲು ತೆರೆದೇಯಿತ್ತು. ಶಂಕೆಯಿಂದ ಒಳಹೋಗಿ ನೋಡಿದಾಗ ಮಲ್ಲಾರವಳ್ಳಿ ಮಲಗುವ ಕೋಣೆಯಲ್ಲಿ ಹತ್ಯೆಗೀಡಾಗಿದ್ದು ಕಂಡಿದೆ. ಪರಿಚಯದವರ್ಯಾರೋ ಈ ಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮನೆಗೆ ಬಂದವರಿಗೆ ಜ್ಯೂಸ್ ನೀಡಲಾಗಿದೆ ಮತ್ತು ದುಬಾರಿ ಉಡುಗೊರೆಯೊಂದು ಸ್ಥಳದಲ್ಲಿ ದೊರೆತಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ಆಗ್ನೇಯ ವಿಭಾಗದ ಡೆಪ್ಯುಟಿ ಕಮಿಷನರ್ ಬಿಎನ್ಎಸ್ ರೆಡ್ಡಿ ಪ್ರಕಾರ, "ಇದು ಪರಿಚಯದವರ ಕೆಲಸ. ಕಾಲಿಂಗ್ ಬೆಲ್ ಮನೆ ಹೊರಗಡೆ ಗ್ರಿಲ್ ಬಳಿಯಿದೆ. ಮಲ್ಲಾರವಳ್ಳಿಯೇ ಸ್ವತಃ ಬಂದು ಗ್ರಿಲ್ ತೆರೆದು ಪರಿಚಯಸ್ಥರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ. ಗ್ಲಾಸ್ ಲೋಟದಲ್ಲಿ ಜ್ಯೂಸನ್ನು ಕೂಡ ನೀಡಲಾಗಿದೆ. ಇದು ಅತ್ಯಾಚಾರವಿರಬಹುದು ಅಥವಾ ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ನಡೆದ ನಂತರ ಹತ್ಯೆ ಮಾಡಲಾಗಿರಬಹುದು".
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್