ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರ ಶಿಫಾರಸು
ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಭಾರದ್ವಾಜ್ ಕರ್ನಾಟಕದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಹೇಳಿದ್ದಾರೆ. ಭಿನ್ನಮತೀಯ ಶಾಸಕರನ್ನು ವಜಾ ಮಾಡಿ ಸಭಾಧ್ಯಕ್ಷ ಕೆಜಿ ಬೋಪಯ್ಯ ಆದೇಶ ಹೊರಡಿಸಿದ್ದು ಅನೈತಿಕ ಮತ್ತು ಅಸಂವಿಧಾನಿಕ ನಡೆ ಎಂದು ತಮ್ಮ ವರದಿಯಲ್ಲಿ ಭಾರದ್ವಾಜ್ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ವಿಶ್ವಾಸಮತ ಪ್ರಕ್ರಿಯೆ ಆರಂಭವಾಗಿ ಕೆಲವೇ ಕ್ಷಣಗಳಲ್ಲಿ ಮುಗಿದ ನಂತರ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ರಾಜ್ಯಪಾಲರನ್ನು ಭೇಟಿಯಾಗಿ ಆಡಳಿತ ಪಕ್ಷದ ವಿರುದ್ಧ ಇರುವ ತಮ್ಮ ಜನಬಲವನ್ನು ತೋರಿಸಿಕೊಂಡಿದ್ದರು. ಬಿಜೆಪಿಯ ವಿರುದ್ಧ 120 ಶಾಸಕರ ತಲೆಎಣಿಕೆ ಇರುವುದನ್ನು ಮನವರಿಕೆ ಮಾಡಿಕೊಂಡ ರಾಜ್ಯಪಾಲರು ಈಗ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ.
ಕರ್ನಾಟಕದ ವಿಧಾನಸಭೆ ಹಿಂದೆ ಎಂದೂ ಕಂಡಿರರದ ರೀತಿಯಲ್ಲಿ ಸದನದಲ್ಲಿ ಇಂದು ಘಟನಾವಳಿಗಳು ಸಂಭವಿಸಿದ್ದವು. ಪಕ್ಷೇತರ ಶಾಸಕರು ಗೂಳಿಗಳಂತೆ ವಿಧಾನಸಭೆಗೆ ನುಗ್ಗಿದ್ದರು, ಮಾರ್ಷಲ್ ಗಳ ಮೇಲೆ ಹಲ್ಲೆಗಳಾಗಿದ್ದವು, ವಿರೋಧಪಕ್ಷದ ನಾಯಕರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದವು.
ದೊಂಬಿ, ಗೊಂದಲ, ಮಾತಿನ ಹಾರಾಟಗಳ ನಡುವೆ ಕ್ಷಣಗಳಲ್ಲಿ ಧ್ವನಿಮತದ ಮೂಲಕ ವಿಶ್ವಾಸಮತದ ಯಾಚನೆಯಾಗಿ ಸರಕಾರ ಬಹುಮತ ಸಾಬೀತುಪಡಿಸಿದೆ ಎಂದು ಸಭಾಧ್ಯಕ್ಷ ಕೆಜಿ ಬೋಪಯ್ಯ ಘೋಷಣೆ ಮಾಡಿದ್ದರು. ಬೋಪಯ್ಯ ಅವರ ಕರ್ತವ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆಂದು ಮುಖ್ಯಮಂತ್ರಿ ಯಡಿಯೂರಪ್ಪ ದೂರಿದ್ದರು.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS