ಸಂಧಾನದ ಹಗ್ಗ ಜಗ್ಗಾಟದಲ್ಲಿ ಕುಮಾರಸ್ವಾಮಿಗೆ ಜಯ
ಈ ಹೊಸ ಬೆಳವಣಿಗೆ ರಾಜಕೀಯ ದೊಂಬರಾಟದಲ್ಲಿ ಅಚ್ಚರಿಯ ಮತ್ತು ನಾಟಕೀಯ ತಿರುವನ್ನು ನೀಡಿದೆ. ಪಕ್ಷೇತರರು ಸೇರಿದಂತೆ ಎಲ್ಲ 13 ಅತೃಪ್ತ ಶಾಸಕರು ಆರು ಕಾರುಗಳಲ್ಲಿ ಜೆಡಿಎಸ್ ನಾಯಕ ಜಮೀರ್ ಅಹ್ಮದ್ ಖಾನ್ ಅವರ ಜೊತೆ ಆರು ಕಾರುಗಳಲ್ಲಿ ತಾಜ್ ಎಕ್ಸೋಟಿಕಾ ರೆಸಾರ್ಟ್ ಬಿಟ್ಟು ಹೊರಬಿದ್ದಿದ್ದಾರೆ. ಆದರೆ, ಯಾವ ಸ್ಥಳಕ್ಕೆ ಹೋದರು ಎಂಬುದು ಇನ್ನೂ ತಿಳಿಯಬೇಕಿದೆ.
ಕೆಲ ಕ್ಷಣಗಳ ಹಿಂದಷ್ಟೇ ಟಿವಿ ಚಾನಲ್ ವೊಂದರ ಜೊತೆ ಭಿನ್ನಮತೀಯರ ಪರವಾಗಿ ಮಾತನಾಡಿದ ಶಿವರಾಜ್ ತಂಗಡಗಿ ಅವರು, ಬಿಜೆಪಿ ಭಿನ್ನಮತೀಯರೊಡನೆ ಜನಾರ್ದನ ರೆಡ್ಡಿ ನಡೆಸಿದ ಸಂಧಾನ ಸಂಪೂರ್ಣ ವಿಫಲವಾಗಿದೆ. ಗೋವಾ ತಾಜ್ ಎಕ್ಸೋಟಿಕಾ ರೆಸಾರ್ಟ್ ಸೇರಿಕೊಂಡಿರುವ ಎಲ್ಲ ಭಿನ್ನಮತೀಯರು ಬಿಜೆಪಿ ವಿರುದ್ಧ ಮತ ಚಲಾಯಿಸುವುತ್ತಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.
ಕಳೆದೆರಡು ದಿನಗಳಲ್ಲಿ ಮೊದಲ ಬಾರಿಗೆ ಭಿನ್ನಮತೀಯರ ಪರವಾಗಿ ಮಾತನಾಡಿರುವ ತಂಗಡಗಿ ಅವರು ರೆಡ್ಡಿ ಅವರ ಯಾವುದೇ ಭರವಸೆಗಳನ್ನು ಒಪ್ಪಿಕೊಂಡಿಲ್ಲ. ಎಲ್ಲ 14 ಭಿನ್ನಮತೀಯರು ಒಗ್ಗಟ್ಟಾಗಿದ್ದೇವೆ. ಅ.11ರಂದು ವಿಶ್ವಾಸ ಮತದ ದಿನ ಬೆಂಗಳೂರಿನಲ್ಲಿ ಎಲ್ಲರೂ ಬರುತ್ತೇವೆ ಎಂದು ಹೇಳಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಶಾಸಕರು ಹೊರಡುವ ಮೊದಲು ಜನಾರ್ದನ ರೆಡ್ಡಿ ಅವರು, ಎಲ್ಲ ಶಾಸಕರು ಸರಕಾರದೊಡನೆ ಇದ್ದಾರೆ, ವಿಶ್ವಾಸ ಮತ ಯಾಚನೆಯಲ್ಲಿ ಜಯಗಳಿಸುವುದಾಗಿ ಹೇಳಿಕೆ ನೀಡಿದ್ದರು. ಅವರು ನೀಡಿದ ಹೇಳಿಕೆ ಸಂಪೂರ್ಣ ಸುಳ್ಳು ಎಂದು ತಂಗಡಗಿ ಕಡ್ಡಿ ಮುರಿದಂತೆ ಹೇಳಿದ್ದಾರೆ.