ಎರಡು ಕಣ್ಣು ಸಾಲದು ಕೊಲ್ಲೂರು ನವರಾತ್ರಿ ನೋಡಲು
ಶುಕ್ರವಾರ 'ಕಲಶ ಸ್ಥಾಪನೆ' ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಕ್ಟೋಬರ್ 16ರಂದು ಬೆಳಗ್ಗೆ 11.30ಕ್ಕೆ 'ಚಂಡಿಕಾ ಯಾಗ' ನಡೆಯಲಿದೆ. ಅಂದು ಸಂಜೆ 6.05ಕ್ಕೆ ಸರಿಯಾಗಿ ರಥೋತ್ಸವವನ್ನು ಕಣ್ತುಂಬಿಕೊಳ್ಳಬಹುದು. ಉತ್ಸವ ವಿಗ್ರಹವನ್ನು ದೇವಲಾಯಕ್ಕೆ ಪ್ರದಕ್ಷಿಣೆ ಹಾಕಿಸಿದ ಬಳಿಕ 'ಪೂರ್ಣ ಕುಂಭಾಭಿಷೇಕ' ನಡೆಯಲಿದೆ.
ಅಕ್ಟೋಬರ್ 17ರ ವಿಜಯ ದಶಮಿಯಂದು ಸರಸ್ವತಿ ಮಂದಿರದಲ್ಲಿ "ವಿದ್ಯಾರಂಭ" ಸಾಂಪ್ರಾದಾಯಿಕ ಆಚರಣೆ ಮುಂಜಾನೆ 4ಕ್ಕೆ ನೆರವೇರಲಿದೆ. ಮಕ್ಕಳ ವಿದ್ಯಾಭಾಸದ ದ್ಯೋತಕವಾಗಿ 'ವಿದ್ಯಾರಂಭ' ಆಚರಣೆ ನಡೆಯಲಿದೆ. ಹಾಗೆಯೇ ಮತ್ತೊಂದು ಆಚರಣೆ 'ನವನ ಪ್ರಾಶನ' ಮಧ್ಯಾಹ್ನ 12.30ಕ್ಕೆ ನಡೆಯಲಿದೆ.
'ವಿದ್ಯಾರಂಭ ' ಆಚರಣೆ ವೇಳೆ ಮಕ್ಕಳ ನಾಲಿಗೆ ಮೇಲೆ 'ಓಂ'ಕಾರವನ್ನು ಅರಿಶಿಣ ಕೊಂಬಿನಲ್ಲಿ ಬರೆಯಲಾಗುತ್ತದೆ. (ಸರಸ್ವತಿ ಮಂದಿರದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಸೌಂದರ್ಯ ಲಹರಿಯನ್ನು ಇಲ್ಲಿಯೇ ರಚಿಸಿದ್ದು ಎಂಬ ಪ್ರತೀತಿ ಇದೆ). 'ವಿದ್ಯಾರಂಭ' ಸಾಂಪ್ರಾದಾಯಿಕ ಉತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾ ದೀಕ್ಷೆ ಪಡೆಯಲಿದ್ದಾರೆ.
ಕೊಲ್ಲೂರಿನಿಂದ 1.5 ಕಿ.ಮೀ ದೂರದಲ್ಲಿರುವ ಶುಕ್ಲ ತೀರ್ಥಕ್ಕೆ ಮೂಕಾಂಬಿಕಾ ಉತ್ಸವ ವಿಗ್ರಹವನ್ನು ಹೊತ್ತು ತಂದು ಬಳಿಕ ಮರಳುತ್ತಾರೆ. ಈ ವಿದ್ಯಾ ಉತ್ಸವವು ಸಂಜೆ 5.30ಕ್ಕೆ ನಡೆಯಲಿದೆ. ಒಂಭತ್ತು ದಿನಗಳ ಕಾಲ ನಡೆಯುವ ಮಹಾ ನವರಾತ್ರಿ ಉತ್ಸವದಲ್ಲಿ 'ಮಹಾದೀಪಾರಧನೆ' ಮತ್ತು 'ಸುಹಾಸಿನಿ ಪೂಜೆ'ಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಒಂಭತ್ತು ದಿನಗಳ ಕಾಲವು ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ.