ಪ್ರತಿಪಕ್ಷಗಳ ವಿರುದ್ದ ಎದ್ದು ನಿಂತ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಡಿನೋಟಿಫೈ ಹಗರಣಗಳನ್ನು ಒಂದೊಂದಾಗಿ ಹೊರತೆಗೆದು ಸರಕಾರದ ಮಾನ ಬೀದಿಯಲ್ಲಿ ಹರಾಜು ಹಾಕಿ, ತಮ್ಮನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇದರ ಮೂಲಕ ಸರಕಾರದ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಹಾಗೂ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ತಿರುಗೇಟು ನೀಡಲು ಹಾಗೂ ಕಡಿವಾಣ ಹಾಕಲು, ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಏನೇನು ಅಕ್ರಮ ನಡೆದಿದೆ ಎಂಬುದನ್ನು ಇಲಾಖೆವಾರು ಹುಡುಕುವಂತೆ ಸಚಿವರಿಗೆ ಸಿಎಂ ಮೌಖಿಕ ಆದೇಶ ನೀಡಿದ್ದಾರೆ.
ಗುಲ್ಬರ್ಗದಲ್ಲಿ ಸೋಮವಾರ ನಡೆದ ಸಂಪುಟ ಸಭೆ ಮುಗಿದ ಬಳಿಕ ಅಧಿಕಾರಿಗಳನ್ನು ಹೊರಗೆ ಕಳುಹಿಸಿ, ಸಹೋದ್ಯೋಗಿಗಳೊಡನೆ ಸಮಾಲೋಚಿಸಿ, ಪ್ರತಿಪಕ್ಷಗಳ ನಾಯಕರು ಮಾಡುತ್ತಿರುವ ಆರೋಪಗಳು ಆಧಾರರಹಿತ. ತಾವು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಪ್ಪತ್ತು ತಿಂಗಳ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ನಡೆಸಿರುವ ಅಕ್ರಮಗಳನ್ನು ಹುಡುಕುವಂತೆ ಸೂಚಿಸಲಾಗಿದೆ.
ಅಲ್ಲದೆ, ಅಧಿಕಾರದಿಂದ ಕೆಳಗಿಳಿಯುವ ಕೊನೆಯ ವಾರದಲ್ಲಿ ಕುಮಾರಸ್ವಾಮಿ ಬಿಡಿಎ ಮತ್ತು ಕೆಐಎಡಿಬಿ ಭೂಮಿ ಡಿನೋಟಿಫೈ, ಗುತ್ತಿಗೆ ಹಂಚಿಕೆ, ನಂದಗುಡಿ ಟೌನ್ಶಿಪ್, ರಾಮ ನಗರದ ಹೆಲ್ತ್ ಸಿಟಿ ಮಂಜೂರಾತಿ ಮತ್ತು ಗುತ್ತಿಗೆ ನೀಡಿಕೆಯಲ್ಲಿ ಅವ್ಯವಹಾರಗಳು ನಡೆದಿರುವ ಗುಮಾನಿ ಇದೆ. ಈ ಕುರಿತು ಗಮನಹರಿಸುವಂತೆ ಮುಖ್ಯಮಂತ್ರಿ ಸೂಚಿಸಿ ದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಲೋಕೋಪಯೋಗಿ ಮತ್ತು ಇಂಧನ ಇಲಾಖೆಯಲ್ಲಿ ಎಚ್.ಡಿ.ರೇವಣ್ಣ ನಡೆಸಿರಬಹುದಾದ ಅಕ್ರಮಗಳನ್ನು ಶೋಧಿಸುವ ಜವಾಬ್ದಾರಿಯನ್ನು ಆಯಾ ಇಲಾಖೆ ಸಚಿವರಿಗೆ ಸಿಎಂ ವಹಿಸಿದ್ದಾರೆ.