ಡಿಸೆಂಬರಲ್ಲಿ ಬೆಂಗಳೂರಲ್ಲಿ ಕನ್ನಡ ಸಾಹಿತ್ಯ ಜಾತ್ರೆ
ಸರ್ಕಾರದ ವತಿಯಿಂದ ಪ್ರತಿ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆಗಾಗಿ ರು.1 ಕೋಟಿಯ ಅನುದಾನವವನ್ನು ನೀಡಲಾಗುತ್ತಿತ್ತು. ಈ ಬಾರಿ ರು. 1.5 ಕೋಟಿ ಅನುದಾನ ಕೋರಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರು. 1 ಕೋಟಿ ನೆರವು ದೊರೆಯಲಿದೆ. ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಇದಕ್ಕಾಗಿ ನೀಡಲಿರುವುದಾಗಿ ಸರ್ಕಾರ ನೌಕರರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆಂದು ಅಶೋಕ್ ತಿಳಿಸಿದರು. ಬೆಂಗಳೂರು ನಗರದ ವಿಧಾನಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ಸಚಿವರುಗಳು ಕೂಡ ತಮ್ಮ ಒಂದು ತಿಂಗಳ ಸಂಬಳವನ್ನು ನೀಡಲಿದ್ದಾರೆ ಎಂದು ಅವರು ಹೇಳಿದರು.
ಸಮ್ಮೇಳನಾ ನಂತರ ಇದರ ನೆನಪಿನಲ್ಲಿ ಕನ್ನಡ ಸ್ಮಾರಕ ಭವನ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದ ಸಚಿವರು ಅದಕ್ಕೆ ಅಗತ್ಯವಾದ ಜಾಗ ನಕ್ಷೆ ಮತ್ತಿತರ ವಿಚಾರಗಳನ್ನು ಕುರಿತಂತೆ ಆನಂತರ ತೀರ್ಮಾನಿಸಲಾಗುವುದೆಂದರು. ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಬೇಕಾದ ಎಲ್ಲ ಸಹಕಾರವನ್ನು ಸರ್ಕಾರವು ನೀಡಲಿದೆಯೆಂದು ತಿಳಿಸಿದ ಸಚಿವರು ಕನ್ನಡ ಭಾಷೆ, ನೆಲ, ನಾಡು ನುಡಿ ಸಂರಕ್ಷಣೆ ಕುರಿತಂತೆ ಸಮ್ಮೇಳನದಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆಯಲ್ಲದೆ, ಕನ್ನಡವನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಒಯ್ಯುವ ಪ್ರಯತ್ನ ಮಾಡಲಾಗುತ್ತದೆ.
ನಾಡಹಬ್ಬವಾಗಿ ಆಚರಣೆ : ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಸಮ್ಮೇಳನವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವ ಸಲುವಾಗಿ ಹಲವಾರು ಸಮಿತಿಗಳನ್ನು ರಚಿಸಲಾಗಿದೆಯೆಂದು ತಿಳಿಸಿದರು. ತಾವು ಸಮ್ಮೇಳನ ಸಮಿತಿಯ ಮಹಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದಾಗಿಯೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವವರ ಊಟ, ವಸತಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದೆಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಅವರು, 40 ವರ್ಷಗಳ ನಂತರ ಬೆಂಗಳೂರು ನಗರದಲ್ಲಿ ಈ ಸಮ್ಮೇಳನ ನಡೆಸುವ ಅವಕಾಶ ದೊರೆತಿದೆ. ಅಕ್ಟೋಬರ್ 1ರಂದು ಈ ಸಂಬಂಧ 8 ಸಂಪುಟಗಳನ್ನೊಳಗೊಂಡ 10 ಸಾವಿರ ಪುಟಗಳ ಕನ್ನಡದ ನಿಘಂಟನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆಂದು ತಿಳಿಸಿದರು. ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ವ್ಯವಸ್ಥೆಗೊಳಿಸುತ್ತಿರುವುದು ಸಮಾಧಾನ ತಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಮುಮ್ತಾಜ್ ಅಲಿಖಾನ್, ಮಹಾಪೌರ ನಟರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯರ್ಮತ್ರಿ ಚಂದ್ರು, ಶಾಸಕರುಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಕಾಯದರ್ಶಿಗಳಾದ ಜಯರಾಮರಾಜೇ ಅರಸ್ ಉಪಸ್ಥಿತರಿದ್ದರು.