ಬಾಬ್ರಿ ಭಯ ಬಿತ್ತುತ್ತಿರುವ ಭಯಗ್ರಸ್ಥ ಸರಕಾರ

ತೀರ್ಪು ರಾಜ್ಯದಲ್ಲಿ ಕೋಮುಗಲಭೆಗೆ ದಾರಿ ಮಾಡಿಕೊಡಬಹುದೆಂಬ ದೂರಾಲೋಚನೆಯಿಂದ ಈ ಕ್ರಮ ಕೈಗೊಳ್ಳುವ ಮುಖಾಂತರ ಸಮಾಜಕ್ಕೆ ಬಿಜೆಪಿ ಸರಕಾರ ಏನು ಹೇಳಲು ಹೊರಟಿದೆ? ಕೋಮು ಗಲಭೆ ಉಂಟಾದರೂ ಅದನ್ನು ಹತ್ತಿಕ್ಕಲು ರಾಜ್ಯ ಸಶಕ್ತವಾಗಿಲ್ಲವೆ? ಬಿಜೆಪಿ ಒಂದು ಹಿಂದೂತ್ವವಾದಿ ಸಂಘಟನೆಯಾಗಿರಬಹುದು. ಆದರೆ, ಅದು ಒಂದು ರಾಜ್ಯವನ್ನು ಮುನ್ನಡೆಸುತ್ತಿರುವ ರಾಜಕೀಯ ಪಕ್ಷವೆಂಬುದನ್ನು ಮರೆಯಬಾರದು. ರಜಾ ಘೋಷಿಸಿದ್ದರಿಂದಲೇ ಮತೀಯ ಗಲಭೆಗೆ ಕುಮ್ಮಕ್ಕು ಕೊಟ್ಟಂತೆ ಆಗುವುದಿಲ್ಲವೆ? ಇದಕ್ಕೆ ಮುಖ್ಯಮಂತ್ರಿ ಏನೆನ್ನುತ್ತಾರೆ.
ಬಿಎಸ್ ಯಡಿಯೂರಪ್ಪನವರು 'ಅಭಿವೃದ್ಧಿ'ಯೇ ತಮ್ಮ ಏಕೈಕ ಮಂತ್ರ ಎಂದು ಎಲ್ಲೆಡೆ ಭಾಷಣಗಳಲ್ಲಿ ಹೇಳುತ್ತಿರುತ್ತಾರೆ. ಆದರೆ, ಈ ರೀತಿ ಎರಡು ದಿನ ರಜಾ ಘೋಷಿಸುವುದರಿಂದ ಅಭಿವೃದ್ಧಿ ಸಾಧ್ಯವೆ? ರಜೆಯ ಸಂದೇಶ ಮೊದಲೇ ಸಾರಿದ್ದರಿಂದ ಮತ್ತು ವಾರಾಂತ್ಯವಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರಿ ಕಚೇರಿಗಳು, ಸಾಫ್ಟ್ ವೇರ್ ಕಂಪನಿಗಳು, ಬ್ಯಾಂಕ್, ಹಣಕಾಸು ಸಂಸ್ಥೆಗಳ ಕಾರ್ಯಚಟುವಟಿಕೆ ತಾನಾಗಿಯೇ ಕುಂಠಿತವಾಗುತ್ತದೆ. ಕೆಲ ಸಂಸ್ಥೆಗಳು ಎರಡು ದಿನ ಕಚೇರಿಗಳಿಗೆ ಬೀಗವನ್ನೂ ಜಡಿಯಬಹುದು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಆಗುವ ನಷ್ಟವಾದರೂ ಎಷ್ಟು? ನಷ್ಟ ತುಂಬಿಸಲು ಮತ್ತೆ ಕೈ ಹಾಕುವುದು ನಾಗರಿಕರ ಜೇಬಿಗೇ ಅಲ್ಲವೆ?
ರಜೆಯ ದುರ್ಲಾಭ ಪಡೆಯುವ ದುಷ್ಟ ಸಂಘಟನೆಗಳು ಸಹಜವಾಗಿ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಬಹುದು. ಒಂದು ಬಸ್ಸಿಗೆ ಕಲ್ಲು ಬಿದ್ದರೆ ಅಥವಾ ಬೆಂಕಿ ಹೊತ್ತಿಕೊಂಡರೆ ಇಡೀ ವ್ಯವಸ್ಥೆಯೇ ಅವ್ಯವಸ್ಥೆಯಾಗಿಬಿಡುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿಗೆ, ಪ್ರಾಣ ಹಾನಿಯುಂಟಾದರೆ ಯಾರು ಹೊಣೆ? ರಜಾ ಘೋಷಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇದೆಲ್ಲದರ ಜವಾಬ್ದಾರಿ ಹೊರುವರೆ?
ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ನಾಗರಿಕರನ್ನು ಹುರಿದುಂಬಿಸುವ, ಸಹಬಾಳ್ವೆಯ ಸಂದೇಶವನ್ನು ಸಾರುವ ಮತ್ತು ಮಕ್ಕಳಲ್ಲಿ ಆತ್ವವಿಶ್ವಾಸ ವೃದ್ಧಿಸುವಂಥ ಕ್ರಮಗಳನ್ನು ಕೈಗೊಳ್ಳುವುದ ಬಿಟ್ಟು ಸ್ಕೂಲಿಗೆ ರಜೆ ಘೋಷಿಸಿದರೆ ಯಾವ ಪುರುಷಾರ್ಥಕವೂ ಸಾಧನೆ ಆಗುವುದಿಲ್ಲ. ಡೌನ್ ವಿತ್ ಯಡ್ಡಿ ಗೌವರ್ನಮೆಂಟ್.












Click it and Unblock the Notifications