ಬಾಬ್ರಿ ತೀರ್ಪು ಮುಂದೂಡಿಸಲು ಕೊನೆ ಪ್ರಯತ್ನ
ನವದೆಹಲಿ, ಸೆ. 22 : ಅಯೋಧ್ಯೆಯ ವಿವಾದಿತ ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ಇದ್ದ ಭೂಮಾಲಿಕತ್ವಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಸೆಪ್ಟೆಂಬರ್ 24ರಂದು ನೀಡಲಿರುವ ಮಹತ್ವದ ಮತ್ತು ಧರ್ಮ ಸೂಕ್ಷ್ಮವಾದ ತೀರ್ಪನ್ನು ಮುಂದೂಡಲು ಕೊಟ್ಟ ಕೊನೆಯ ಪ್ರಯತ್ನವಾಗಿ ರಮೇಶ್ ಚಂದ್ರ ತ್ರಿಪಾಠಿ ಅವರು ಇಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮಧ್ಯಾನ್ಹ 2 ಗಂಟೆಗೆ ಕೈಗೆತ್ತಿಕೊಳ್ಳಲಿದೆ.
ತೀರ್ಪು ಮುಂದೂಡಬೇಕು ಮತ್ತು ಸೌಹಾರ್ದಯುತವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಒಪ್ಪಂದ ಮಾಡಿಕೊಳ್ಳಲು ಕಾಲಾವಕೋಶ ಕೋರಿ ತ್ರಿಪಾಠಿ ಸೆ.17ರಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯಲ್ಲಿ ಯಾವುದೇ ಹುರುಳಿಲ್ಲವೆಂದು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಆದರೆ, ತಮ್ಮ ಈ ಅರ್ಜಿ ತಿರಸ್ಕರಿಸುವಾಗ ಓರ್ವ ನ್ಯಾಯಮೂರ್ತಿಗಳ ಸಲಹೆ ಇತರ ಇಬ್ಬರು ನ್ಯಾಯಮೂರ್ತಿಗಳು ಪಡೆದಿರಲಿಲ್ಲವೆಂಬುದು ತ್ರಿಪಾಠಿಯ ವಾದ. ಈ ಕಾರಣದಿಂದಾಗಿ ಮತ್ತು ತೀರ್ಪು ಹೊರಬಿದ್ದರೆ ಕೋಮುಗಲಭೆಯಾಗುವ ಸಂಭವವಿದೆಯೆಂದು ಕಾರಣ ಮುಂದಿಟ್ಟುಕೊಂಡು ತೀರ್ಪಿನ ದಿನಾಂಕವನ್ನು ಮಂದೂಡಿಸಲು ತ್ರಿಪಾಠಿ ಭಗೀರತ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಅವರು ಮುಂದೊಡ್ಡರುವ ಕಾರಣ, ಕೋಮುಗಲಭೆ ತಪ್ಪಿಸುವುದಲ್ಲದೆ ಕಾಮನ್ ವೆಲ್ತ್ ಕ್ರೀಡಾ ಕೂಟಕ್ಕೆ ಯಾವುದೇ ಅಡ್ಡಿ ಉಂಟಾಗಬಾರದು.

ನ್ಯಾಯಮೂರ್ತಿ ಎಸ್.ಯು. ಖಾನ್, ನ್ಯಾ. ಡಿ.ವಿ. ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠದಲ್ಲಿ ನ್ಯಾ. ಡಿವಿ ಶರ್ಮಾ ಹೊರತುಪಡಿಸಿ ಉಳಿದಿಬ್ಬರು ತ್ರಿಪಾಠಿ ಹೂಡಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು. ಅರ್ಜಿಯಲ್ಲಿ ಪ್ರಾಮಾಣಿಕತೆಯ ಕೊರತೆಯಿದ್ದು, ನ್ಯಾಯಾಲಯದ ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ತ್ರಿಪಾಠಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಂಡ ವಿಧಿಸಿದ್ದರು.












Click it and Unblock the Notifications