ಬಾಬ್ರಿ ತೀರ್ಪು : 24, 25ರಂದು ಶಾಲಾ ಕಾಲೇಜು ರಜಾ

ಸಂಪುಟದಲ್ಲಿ ಹೊಸದಾಗಿ ಸೇರಿರುವ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಧ್ಯಮದೊಡನೆ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಾರದೆಂಬ ಮುನ್ನೆಚ್ಚರಿಕೆಯಿಂದ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ ಎಂದು ತಿಳಿಸಿದರು. ಜನರು ಶಾಂತಿ ಕಾಪಾಡಬೇಕೆಂದು ಅವರು ರಾಜ್ಯದ ಜನತೆಗೆ ಕರೆ ನೀಡಿದರು. ಆದರೆ, ಸರಕಾರಿ ಕಚೇರಿಗಳ ಕಾರ್ಯನಿರ್ವಹಣೆ ಕುರಿತಂತೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
ಅಯೋಧ್ಯೆಯ ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ಇದ್ದ ಭೂಮಿಯ ಹಕ್ಕಿನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬೀಳುತ್ತಿರುವುದರಿಂದ ಮತೀಯ ಸ್ವಾಮ್ಯತೆ ಇರುವ ಪ್ರದೇಶಗಳಲ್ಲಿ ಗಲಭೆ ಸಂಭವಿಸಬಹುದೆಂಬ ನಿರೀಕ್ಷೆಯಿಂದ ರಾಜ್ಯ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಸರ್ವಪಕ್ಷಗಳ ನಾಯಕ ಸಭೆಯನ್ನು ವಿಧಾನಸೌಧದಲ್ಲಿ ಸೆ.22ರ ಮಧ್ಯಾಹ್ನ 3.30ಕ್ಕೆ ಕರೆಯಲಾಗಿದೆ. ನಂತರ ಸಂಜೆ 5.30 ಗಂಟೆಗೆ ಕೋಮು ಸೌಹಾರ್ದತೆ ಕಾಪಾಡಬೇಕೆಂಬ ಉದ್ದೇಶದಿಂದ ಸರ್ವಧರ್ಮ ನಾಯಕರುಗಳ ಸಭೆಯನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕರೆಯಲಾಗಿದೆ.
ಧರ್ಮ ಸೂಕ್ಷ್ಮ ಜಿಲ್ಲೆಗಳಾದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗಗಳಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಕಟ್ಟೆಚ್ಚರ : ಬೆಂಗಳೂರಿನಲ್ಲಿ ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದೂ ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಹೇಳಿದ್ದಾರೆ. ಸೆ.24ರಂದು ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. 24ರ ಬೆಳಿಗ್ಗೆಯಿಂದ 25ರ ಬೆಳಗಿನ 6 ಗಂಟೆ ವರೆಗೆ ಅಪರಾಧಿ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ. ನಗರದಾದ್ಯಂತ 20 ಸಾವಿರ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣಿಡಲಿದ್ದಾರೆ. ಜೊತೆಗೆ, ಕೆಎಸ್ಆರ್ ಪಿ ಮತ್ತು ಸಿಆರ್ ಪಿಎಫ್ ತುಡುಡಿಗಳನ್ನು ಕೂಡ ಭದ್ರತೆಯಾಗಿ ನಿಯೋಜಿಸಲಾಗುತ್ತಿದೆ.












Click it and Unblock the Notifications