ಲಿಂಗಾಯತರ ಹೆಗಲಿಗೆ ಕೆಪಿಸಿಸಿ ಅಧ್ಯಕ್ಷಗಿರಿ?

ರಾಜ್ಯದ ಬಹುಸಂಖ್ಯಾತ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದಕ್ಕೆ ಕಾಂಗ್ರೆಸ್ ಪಕ್ಷ ಈಗಾಗಲೇ ಸಾಕಷ್ಟು ಪಾಠ ಕಲಿತಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಮರ್ಥವಾಗಿ ಎದುರಿಸಲು ಅದೇ ಸಮುದಾಯದ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಬೇಕು ಎನ್ನುವುದು ಮುಖಂಡರ ಅಭಿಮತವಾಗಿದೆ. ಮುಖಂಡರ ಈ ಒತ್ತಾಯಕ್ಕೆ ಹೈಕಮಾಂಡ್ ಸಹಮತ ಸೂಚಿಸಿದೆ ಎನ್ನಲಾಗಿದೆ.
ಲಿಂಗಾಯತರ ವಿಶ್ವಾಸ ಕಳೆದುಕೊಂಡಿರುವ ಪಕ್ಷ ಜನರ ಮನಸ್ಸಿನಿಂದ ದೂರವಾಗತೊಡಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುವುದು ಗ್ಯಾರಂಟಿ. ಹೀಗಾಗಿ, ಲಿಂಗಾಯತ ಮುಖಂಡರನ್ನು ಅಧ್ಯಕ್ಷರನ್ನಾಗಿ ಮಾಡುವುದು ಅನಿವಾರ್ಯ ಎಂದು ರಾಜ್ಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಿಂದ ಕೇಂದ್ರ ಮಂತ್ರಿ ಆಗಿರುವವರಲ್ಲಿ ಲಿಂಗಾಯರಿಗೆ ಅಧ್ಯತೆ ನೀಡಿಲ್ಲ. ಎಐಸಿಸಿಯಲ್ಲಿ ಲಿಂಗಾಯತರಿಗೆ ಸ್ಥಾನವಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲೂ ಈ ಸಮುದಾಯವನ್ನು ದೂರತಳ್ಳಲಾಗಿದೆ. ಈ ಎಲ್ಲ ಅಂಶಗಳಿಂದ ಲಿಂಗಾಯತರು ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟಿದ್ದಾರೆ ಎಂದು ಮುಖಂಡರು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ಸಿ ಎಸ್ ನಾಡಗೌಡ, ಎಸ್ ಎಸ್ ಮಲ್ಲಿಕಾರ್ಜುನ, ಎಂ ಬಿ ಪಾಟೀಲ್ ಮತ್ತು ಬಸವರಾಜ ರಾಯರೆಡ್ಡಿ ಅವರ ಹೆಸರುಗಳು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರತೊಡಗಿವೆ.












Click it and Unblock the Notifications