ಬನ್ನೇರುಘಟ್ಟದಲ್ಲಿ ನಿಲ್ಲದ ಸಾವಿನ ಸರಣಿ
ಸತ್ತ ಮರಿಹುಲಿಯು ಗೌರಿ ಮತ್ತು ಟಿಪ್ಪುಹುಲಿಗಳ ಸಂತಾನವಾಗಿದ್ದು, ಸಾವಿಗೀಡಾದ ಮರಿಗೆ ಕೇವಲ 45 ದಿವಸಗಳು ಮಾತ್ರ ವಯಸ್ಸಾಗಿತ್ತು. ಎಲ್ಲಾ ಪ್ರಾಣಿಗಳು ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮರಿಹುಲಿ ಸತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಸರಣಿ ಸಾವಿನ ನಂತರ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಲಾಗಿತ್ತು. ಆಹಾರವನ್ನು ವಿಶೇಷವಾಗಿ ಸಂಸ್ಕರಿಸಿ ಪ್ರಾಣಿಗಳಿಗೆ ವೈದ್ಯರ ಸಲಹೆಯಂತೆ ನೀಡಲಾಗುತ್ತಿತ್ತು. ಹೀಗಿದ್ದರೂ ಸರಣಿ ಸಾವು ಮುಂದುವರೆದಿರುವುದು ಹಲವು ಆತಂಕಗಳಿಗೆ ಎಡೆ ಮಾಡಿ ಕೊಟ್ಟಿದೆ. ಸಾವಿಗೀಡಾದ ಹುಲಿಮರಿಯನ್ನು ಹೆಬ್ಬಾಳದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ.
ಕೋಳಿ ಮಾಂಸ ಕಾರಣ?: ಇಲ್ಲಿಯವರೆಗೂ ಸಾವನ್ನಪ್ಪಿದ್ದ ಹುಲಿಗಳಿಗೆ ಕೋಳಿ ಮಾಂಸದಲ್ಲಿನ ವೈರಸ್ ಕಾರಣವಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹುಲಿಗಳಿಗೆ ವಾರದಿಂದ ಕೋಳಿ ಮಾಂಸವನ್ನು ನಿಷೇಧಿಸಲಾಗಿತ್ತು.
ವೈದ್ಯರ ತೀವ್ರ ನಿಗಾದಲ್ಲಿದ್ದ ಹುಲಿ ಮರಿ ಕೋಳಿ ಮಾಂಸವನ್ನು ಸೇವಿಸದಿದ್ದರೂ ಸಾವಿಗೀಡಾಗಿದೆ. ಇದೇ ವೇಳೆ ಅನಾರೋಗ್ಯ ಪೀಡಿತ ಹುಲಿಗಳಾದ ಇಂಚರ, ಅನು, ಮಿಂಚು, ರಾಕಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯ ಡಾ.ಚೆಟ್ಟಿಯಪ್ಪ ತಿಳಿಸಿದ್ದಾರೆ.
ಎರಡು ಹುಲಿ ಹಾಗೂ ಎರಡು ಸಿಂಹಗಳನ್ನು ಕಳೆದುಕೊಂಡಿರುವ ಬನ್ನೇರುಘಟ್ಟ ಜೈವಿಕ ಕೇಂದ್ರದಲ್ಲಿ ಈಗ ಸೂತಕದ ಛಾಯೆ ಆವರಿಸಿದ್ದು, ಸಾವಿನ ಕಾರಣವನ್ನು ಹುಡುಕುವಲ್ಲಿ ಪಶುವೈದ್ಯರು ನಿರತರಾಗಿದ್ದಾರೆ.