ನ್ಯಾಯ ಕೇಳಿದ ವಿದ್ಯಾರ್ಥಿಗಳಿಗೆ ಲಾಠಿ ಏಟು

ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ಆರಂಭವಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಯಲ್ಲಿ ಜಿಲ್ಲಾ ದಲಿತ ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ , ಎಸ್ ಎಫ್ ಐ ಸೇರಿದಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಕುಲಪತಿ ಉತ್ತರಿಸಲಿ : ಸ್ನಾತಕೋತ್ತರ ಕೇಂದ್ರದತ್ತ ದಾಳಿಯಿಟ್ಟ ಪ್ರತಿಭಟನಾಕಾರರಲ್ಲಿ ಕೆಲವರು ಧರಣಿ ಕುಳಿತು, ಸ್ಥಳಕ್ಕೆ ಕುಲಪತಿ ಆಗಮಿಸಬೇಕೆಂದು ಪಟ್ಟು ಹಿಡಿದರು. ಇನ್ನು ಕೆಲ ವಿದ್ಯಾರ್ಥಿಗಳು ಕೌನ್ಸೆಲಿಂಗ್ ಕಚೇರಿಗೆ ನುಗ್ಗಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಡ್ಡಿಪಡಿಸಿ ಪ್ರವೇಶ ದಾಖಲಾತಿ ಪುಸ್ತಕ ಹರಿದು ಹಾಕಿ, ಅಲ್ಲಿದ್ದ ಕುರ್ಚಿ ಗಳನ್ನು ಧ್ವಂಸಗೊಳಿಸಿದರು.
ಪರಿಸ್ಥಿತಿ ಕೈ ಮೀರತೊಡಗಿದಾಗ ಪೊಲೀಸರು ಲಾಠಿ ಚಾರ್ಚ್ ಮಾಡತೊಡಗಿದರು. ಕೌನ್ಸೆಲಿಂಗ್ ಗೆ ಬಂದಿದ್ದ ವಿದ್ಯಾರ್ಥಿಗಳು ಪ್ರತಿಭಟನಾಕಾರರು ದಿಕ್ಕಾಪಾಲಾದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಬಿ.ಎಚ್ ರಸ್ತೆವರೆಗೂ ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಹೋಗಿ ಮನಸೋ ಇಚ್ಛೆ ಥಳಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 9 ವಿದ್ಯಾರ್ಥಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟೆಲ್ಲಾ ರಾದ್ಧಾಂತವಾದರೂ ತುಮಕೂರು ವಿಶ್ವವಿದ್ಯಾಲಯದ ಕುಲಪರಿ ಡಾ. ಎಸ್ ಸಿ ಶರ್ಮಾ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2008 ರಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಸೀಟುಗಳಿಗೆ 45 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಒದಗಿಸಲಾಗಿತ್ತು. ಈ ಬಾರಿ ಈ ಸಂಖ್ಯೆಯನ್ನು 35ಕ್ಕೆ ಇಳಿಸಲಾಗಿದೆ.
ತುಮಕೂರು ವಿವಿಯಲ್ಲಿ 12 ಪಿಜಿ ಕೋರ್ಸ್ ಗಳಿದ್ದು, ಪ್ರತಿ ಕೋರ್ಸ್ ಗೆ 40 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಇದರಲ್ಲಿ 20 ಸೀಟು ಮೆರಿಟ್ ವರ್ಗ, 10 ಪೇಮೆಂಟ್ ಹಾಗೂ 15 ಇತರೆ ವರ್ಗಕ್ಕೆ ಸೇರಿದೆ. ಹೆಚ್ಚುವರಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ವಿವಿಗೆ ಸರಿಯಾದ ಕಟ್ಟಡವಿಲ್ಲ ಎನ್ನಲಾಗಿದೆ.












Click it and Unblock the Notifications