ದೆಹಲಿ ಶೂಟೌಟ್ ಹೊಣೆ ಹೊತ್ತ ಮುಜಾಹಿದ್ದೀನ್
ಐತಿಹಾಸಿಕ ಜಾಮಾ ಮಸೀದಿಯ 3 ನೇ ಸಂಖ್ಯೆಯ ಗೇಟ್ ಬಳಿ ಪ್ರವಾಸಿಗರ ಬಸ್ ಮೇಲೆ ಬೈಕಿನಿಂದ ಬಂದ ಅಜ್ಞಾತ ವ್ಯಕ್ತಿಗಳುಏಕಾಏಕಿ ಗುಂಡಿನ ಮಳೆಗರೆದು ಇಬ್ಬರು ತೈವಾನ್ ದೇಶದ ಪ್ರಜೆಗಳನ್ನು ಗಾಯಗೊಳಿಸಿದ್ದಾರೆ. ಗಾಯಾಳುಗಳನ್ನು ಲೋಕ್ ನಾಯಕ್ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ನಂತರ ಬಿಬಿಸಿ ಹಿಂದಿ ರೇಡಿಯೋ ಸರ್ವಿಸ್ ಗೆ ಇಮೇಲ್ ಮೂಲಕ ಸಂದೇಶ ಕಳಿಸಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ, "ಇದು ಅಲ್ಲಾಹ್ ನ ಸಿಂಹಗಳ ಕೃತ್ಯ, ನಿಮಗೆ ತಾಕತ್ತಿದ್ದರೆ ಕಾಮನ್ ವೆಲ್ತ್ ಕ್ರೀಡೆಯನ್ನು ಆಯೋಜಿಸಿ, ಈಗಾಗಲೆ ನಿಮ್ಮ ತಯಾರಿ ಪೂರ್ಣಗೊಂಡಿದ್ದು, ಕ್ರೀಡಾಕೂಟದ ಉದ್ಘಾಟನೆಗೆ ಕಾತುರದಿಂದ ಸಜ್ಜಾಗುತ್ತಿರುವ ನಿಮಗೆ ಆಶ್ಚರ್ಯಕರ ಉಡುಗೊರೆ ನೀಡಲಿದ್ದೇವೆ" ಎಂದು ಹೇಳಿದೆ.
ಸಿಮಿ ಸಂಘಟನೆ ಪರ್ಯಾಯ ರೂಪವಾದ ಇಂಡಿಯನ್ ಮುಜಾಹೀದ್ದೀನ್ ಗೆ ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಸಂಘಟನೆಯ ಬೆಂಬಲ ಕೂಡಾ ಇದೆ. ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಘಟನೆಗೆ ಪ್ರತ್ರಿಕ್ರಿಯಿಸಿ,ಸಾರ್ವಜನಿಕರು ಭಯಪಡುವ ಕಾರಣವಿಲ್ಲ, ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಲಾಗಿದೆ ಎಂದಿದ್ದಾರೆ.