ಪ್ರಿಯಾಂಕ ಕೊಲೆ ಆರೋಪಿ ಸತೀಶ್ ಆತ್ಮಹತ್ಯೆಗೆ ಯತ್ನ
ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಹುಳಿಮಾವು ಠಾಣೆಯ ಪೊಲೀಸರು ಆರೋಪಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದರು. ಸೋಮವಾರವೂ ವಿಚಾರಣೆ ನಡೆದಿತ್ತು. ರಾತ್ರಿ 7 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದ ಜೈಲಿನಲ್ಲಿಯೇ ಮೊಳೆಯೊಂದಕ್ಕೆ ಎಡಗೈ ನರ ಕತ್ತರಿಸಿಕೊಳ್ಳಲು ಯತ್ನಿಸಿದ್ದಾನೆ.
ತಕ್ಷಣ ನೋಡಿದ ಪೇದೆ ಸಬ್ ಇನ್ಸ್ ಇನ್ಸ್ ಪೆಕ್ಟರ್ ಗೆ ಮಾಹಿತಿ ನೀಡಿದ್ದಾನೆ. ಪೊಲೀಸ್ ಠಾಣೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಅನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಠಾಣೆಯಲ್ಲಿಯೇ ಸತೀಶ್ ಗುಪ್ತಾನನ್ನು ಇರಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿ ಸತೀಶ್ ಗುಪ್ತಾನ ವಿಚಾರಣೆ ಶನಿವಾರ ಪೂರ್ಣಗೊಳ್ಳಲಿದ್ದು ಪ್ರಕರಣದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಡಿಸಿಪಿ ಬಿ ಎನ್ ಎಸ್ ರೆಡ್ಡಿ ತಿಳಿಸಿದ್ದಾರೆ. ಕಳೆದ ಆ.11ರಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಪ್ರಿಯಾಂಕಾ ಅವರನ್ನು ಪತಿ ಸತೀಶ್ ಕೊಲೆ ಮಾಡಿದ್ದರು.
ಸೇವೆಯಿಂದ ಸತೀಶ್ ಅಮಾನತು : ಪತ್ನಿ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿರುವ ಸತೀಶ್ ಗುಪ್ತಾನನ್ನು ಸೇವೆಯಿಂದ ಅಮಾನತು ಮಾಡಿರುವುದಾಗಿ ಇನ್ಫೋಸಿಸ್ ಸೋಮವಾರ ಸ್ಪಷ್ಟಪಡಿಸಿದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಎಲ್ಲ ರೀತಿಯಿಂದಲೂ ಕಂಪನಿ ಸಹಕಾರ ನೀಡಲಿದೆ. ಪೊಲೀಸ್ ತನಿಖೆಯ ಸತ್ಯಾಸತ್ಯತೆ ಅರಿತ ನಂತರ ಕಂಪನಿ ಕಾನೂನಿನ ಪ್ರಕಾರ ಆರೋಪಿ ಸತೀಶ್ ಗುಪ್ತಾ ವಿರುದ್ಧ ಯಾವ ಕ್ರಮ ಜರುಗಿಸಬೇಕೆಂಬುದನ್ನು ನಿರ್ಧರಿಸಲಾಗುವುದು ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.