ನಂದಿನಿ ಚಾಕಲೇಟ್ ತಿನ್ನಲು ರೆಡಿನಾ?
ಆರ್ಬಿಕೆಎಂಯು ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಔಪಚಾರಿಕ ಮಾತುಕತೆಗಳು ನಡೆದಿವೆ. ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡ ಮಂಗಳೂರಿಗೆ ತೆರಳಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಹಾಲು ಉತ್ಪಾದಕರಿಗೆ ಬಂಪರ್: ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ 50 ಪೈಸೆಯನ್ನು ಆಗಸ್ಟ್ 16 ರ ಸೋಮವಾರದಿಂದ ಹೆಚ್ಚಿಗೆ ಪಾವತಿಸಲಾಗುತ್ತದೆ.
ಹಾಲು ಉತ್ಪಾದಕರಿಂದ ಪಡೆಯುವ ಪ್ರತೀ ಲೀಟರ್ ಆಕಳ ಹಾಲಿಗೆ 15 ರು. 50 ಪೈಸೆ, ಎಮ್ಮೆಯ ಹಾಲಿಗೆ 17 ರು. 70 ಪೈಸೆ ನೀಡಲಾಗುತ್ತದೆ. ಇದರ ಜೊತೆಯಲ್ಲಿ ಸರ್ಕಾರದ 2 ರು. ಸಹಾಯಧನ ಮುಂದುವರೆಯಲಿದೆ ಎಂದರು.
ಬಳ್ಳಾರಿಯ ಆರ್ಬಿಕೆಎಂಯು ಒಕ್ಕೂಟದಲ್ಲಿ 20-25 ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ 58 ನೌಕರರನ್ನು ಮಾನವೀಯತೆಯ ಆಧಾರದ ಮೇಲೆ ಖಾಯಂ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಒಟ್ಟು 19,09,658 ರು. ಬೋನಸ್ ನೀಡಲಾಗಿದೆ. 9,22,752 ರು. ಡಿವಿಡೆಂಡ್ ನೀಡಲಾಗಿದೆ ಎಂದು ಹೇಳಿದರು.
ನಂದಿನಿ ಹಾಲು ರಫ್ತಿಗೆ ಆದ್ಯತೆ: ಕರ್ನಾಟಕದ ನಂದಿನಿ ಹಾಲಿಗೆ ಗೋವಾದಲ್ಲಿ ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಬರುವ ಹೊರ ರಾಜ್ಯದ ಹಾಲುಗಳಿಗೆ ಹೆಚ್ಚಿನ ತೆರಿಗೆ ವಿಧಿಸಬೇಕಾಗಿದೆ. ರಾಜ್ಯದ ಎಲ್ಲಾ ಹಾಲು ಉತ್ಪಾದನಾ ಗೋಡಾನ್ಗಳಲ್ಲಿ ಇರುವ 7 ಲಕ್ಷ ಟನ್ ಹಾಲಿನ ಪುಡಿಯನ್ನು ನಾವು ಮಾರಾಟ ಮಾಡಲು ವಿದೇಶಿ ಕಂಪನಿಗಳು ತೀವ್ರ ಪೈಪೋಟಿ ನೀಡುತ್ತಿವೆ.
ರಾಜ್ಯದಲ್ಲಿ ಇರುವ ದೊಡ್ಡ ಪ್ರಮಾಣದ ಹಾಲಿನ ಪುಡಿಯನ್ನು ಮಾರಾಟ ಮಾಡಲಿಕ್ಕಾಗಿ ರಾಜ್ಯದಲ್ಲಿ ವಿದೇಶಿ ಹಾಲಿನ ಪುಡಿಗಳ ಮಾರಾಟನ್ನು ನಿಯಂತ್ರಿಸಲು ಕೋರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ಪತ್ರ ಬರೆಯುವುದಾಗಿ ಅವರು ಹೇಳಿದರು.