ಜಾತಿ ಆಧಾರಿತ ಮೀಸಲಾತಿ ಸರಿ ಎಂದ ರಾಹುಲ್
ಅಹರ್ತೆ ಇದ್ದರೂ ವ್ಯಾಸಂಗಕ್ಕಾಗಿ ಇಷ್ಟವಿಲ್ಲದ ವಿಷಯ ತೆಗೆದು ಕೊಂಡು ಮನಸಿಲ್ಲದ ವೃತ್ತಿ ಕೈಗೊಳ್ಳುವ ಸ್ಥಿತಿ ಬದಲಾಗಬೇಕಿದೆ. ಕಡಿಮೆ ಅಂಕ ಪಡೆದವರು ವಿದ್ಯಾರ್ಜನೆ ಹೆಸರಲ್ಲಿ ಅರ್ಹತೆಯುಳ್ಳವರ ಪಾಲು ಪಡೆಯುವುದು ಎಷ್ಟು ಸರಿ? ಎಂಬ ವಿದ್ಯಾರ್ಥಿಗಳ ಪ್ರಶ್ನೆ ರಾಹುಲ್ಗೆ ಕಸಿವಿಸಿ ಉಂಟು ಮಾಡಿತು.
ರಾಜ್ಯಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸಿದ್ಧ ಸಂದರ್ಭದಲ್ಲಿ ಶನಿವಾರ ನಗರದ ಬಸವನಗುಡಿ ನ್ಯಾಷನಲ್ ಪದವಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲು ವಿಫಲರಾದರು.
ಶಿಕ್ಷಣದಲ್ಲಿ ದಲಿತ, ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿರುವುದರಿಂದ ಅವರೆಲ್ಲರೂ ಮೇಲೆ ಬರಲು ಕಾರಣವಾಗಿದೆ. ಮೇಲ್ವರ್ಗದವರ ಸಮಾನಕ್ಕೆ ಶೋಷಿತರು ಬರಬೇಕೆಂಬ ವಿಚಾರಕ್ಕಾಗಿ ಮೀಸಲಾತಿ ಇದೆ. ಎಲ್ಲಿಯವರೆಗೆ ಸಮಾಜದಲ್ಲಿ ತಾರತಮ್ಯ ಇರುತ್ತದೋ ಅಲ್ಲಿಯವರೆಗೂ ಮೀಸಲಾಗಿ ಇರಬೇಕೆಂಬ ಬೇಡಿಕೆ ಜನರಿಂದಲೇ ಕೇಳಿಬರುತ್ತದೆ. ಇದಕ್ಕೆ ಏನೂ ಮಾಡಲಾಗದು ಎಂದರು.
ಹಳ್ಳಿಗಳಿಗೆ ಬನ್ನಿ, ರಾಜಕೀಯ ಸೇರಿರಿ: ಎಲ್ಲಾ ಸಂವಾದ ಕಾರ್ಯಕ್ರಮಗಳಲ್ಲಿ ಹೇಳುವಂತೆ ರಾಹುಲ್ ಗಾಂಧಿ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಗುಲ್ಭರ್ಗಾದಲ್ಲೂ ವಿದ್ಯಾರ್ಥಿಗಳಿಗೆ ರಾಜಕೀಯ ಸೇರಿ, ವ್ಯವಸ್ಥೆಯನ್ನು ದೂಷಿಸಬೇಡಿ. ಕೆಟ್ಟ ರಾಜಕಾರಣಿಗಳನ್ನು ಗುಂಡಿಟ್ಟು ಕೊಲ್ಲುವ ಬದಲು ನೀವು ರಾಜಕೀಯ ಸೇರಿ ಒಳ್ಳೆ ರಾಜಕಾರಣಿಗಳಾಗಿ, ನಿಮಗೆ ಬೇಕಾದ ತರಬೇತಿ ನೀಡಲು ನಮ್ಮ ಪಕ್ಷ ಸದಾ ಸಿದ್ಧ ಎಂದರು. ಹಳ್ಳಿಗಳಿಗೆ ಭೇಟಿ ನೀಡಿ, ಶೋಷಿತ ವರ್ಗದ ಕಷ್ಟ ನಷ್ಟಗಳ ಅರಿವು ಪಡೆಯಿರಿ ಎಂದರು.
ಕೆಪಿಸಿಸಿ ದಿಲ್ ಖುಷ್: ಅಕ್ರಮ ಗಣಿಗಾರಿಕೆಯ ವಿರುದ್ಧ ರಾಜ್ಯ ಕಾಂಗ್ರೆಸ್ ನಡೆಸಿದ ಪಾದಯಾತ್ರೆ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರವನ್ನು ಬುಡ ಸಮೇತ ಕಿತ್ತೊಗೆಯುವವರೆಗೂ ಹೋರಾಟ ಮುಂದುವರೆಸಿ ಎಂದು ಕೆಪಿಸಿಸಿ ಕಚೇರಿಯಲ್ಲಿ ಕರೆ ಕೊಟ್ಟರು.