ಆ.25ರಿಂದ ಮಂತ್ರಾಲಯ ಗುರುಗಳ ಆರಾಧನೆ
ಆ.23ರಂದು ಶ್ರೀಮಠದ ಪೀಠಾಧಿಪತಿ ಸುಯತೀಂದ್ರ ತೀರ್ಥರು ಗೋಪೂಜೆ, ಧಾನ್ಯ ಪೂಜೆ ಹಾಗೂ ಲಕ್ಷ್ಮಿ ಪೂಜೆ ನೆರವೇರಿಸುವ ಮೂಲಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ನಾಂದಿ ಹಾಡಲಿದ್ದಾರೆ. ಆ.24ರಂದು ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ, ಬೆಳಗ್ಗೆ 9 ಕ್ಕೆ ರಜತ ಮಂಟಪೋತ್ಸವ ಜರುಗಲಿದೆ. ಆ.26 ರಂದುಮಧ್ವಾರಾಧನೆ, ಗಜ, ರಜತ ಹಾಗೂ ಸ್ವರ್ಣ ರಥೋತ್ಸವ ನಡೆಯಲಿದೆ.
ಆ.27ರಂದು ಬೆಳಗ್ಗೆ ಉತ್ತರಾಧನೆ ನಿಮಿತ್ತ ಮಹಾರಥೋತ್ಸವ. ಆ.28ರಂದು ಶ್ರೀಸುಜ್ಞಾನೇಂದ್ರ ತೀರ್ಥರ ಆರಾಧನೆ ನಡೆಯಲಿದೆ. ಆ.29ರಂದು ಸರ್ವ ಸಮರ್ಪಣೋತ್ಸವವನ್ನು ಆಯೋಜಿಸಲಾಗಿದೆ.
ಗ್ರಂಥ ಬಿಡುಗಡೆ: ಮಧ್ವಾರಾಧನೆ ದಿನದಂದು ದಿವಂಗತ ಅಗ್ರಹಾರ ನಾರಾಯಣ ತಂತ್ರಿಗಳು ಶ್ರೀಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಮಾಲಿಕೆಯಲ್ಲಿ ರಚಿಸಿದ ದಶಪ್ರಕರಣ ಗ್ರಂಥಗಳ ಕನ್ನಡ ಟೀಕಾ ಭಾಷಾಂತರ ಗ್ರಂಥ, ಶ್ರೀರಾಘವೇಂದ್ರ ವಿಜಯ ಹಾಗೂ ಗುರುಪರಂಪರಾ ದರ್ಶನಂ ಗ್ರಂಥಗಳ ಬಿಡುಗಡೆ ಇರುತ್ತದೆ.
ಪ್ರಶಸ್ತಿ ಪ್ರದಾನ: ಉಡುಪಿಯ ಅಗ್ರಹಾರ ನಾರಾಯಣ ತಂತ್ರಿಗಳಿಗೆ ಮರಣೋತ್ತರವಾಗಿ ಹಾಗೂ ಬೆಂಗಳೂರಿನ ಮಲ್ಲಪ್ಪ ಶಿಂಧೆ ಅವರಿಗೆ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಸ್ಥಾನ ವಿದ್ವಾನ್ ಗೌರವವನ್ನು ಆಂಧ್ರದ ರಾಜಮಂಡ್ರಿಯ ಖ್ಯಾತ ಮೃದಂಗಪಟು ಡಾ.ವಿ. ಕಮಲಾಕರ ರಾವ್ ಅವರಿಗೆ ನೀಡಲಾಗುತ್ತದೆ.
ಸಾಂಸ್ಕೃತಿಕ ವೈಭವ: ಖ್ಯಾತ ಗಾಯಕರಾದ ಅನುಕೃಪಾ ರೌಡೂರು, ಸಂಪತ್ ಕುಮಾರ್ ಸೇರಿದಂತೆ ಹಲವಾರು ಸಂಗೀತಗಾರರಿಂದ ಶ್ರೀಗುರುಗಳಿಗೆ ಸಂಗೀತ ಸೇವೆ ಸಲ್ಲಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.