ಸಿರಿವಂತ ದೇವಾಲಯಗಳ ಆಭರಣ ಲೆಕ್ಕ ಆರಂಭ

ಮುಜರಾಯಿ ವ್ಯಾಪ್ತಿಗೆ ಬರುವ ರಾಜ್ಯದಲ್ಲಿನ ಸುಮಾರು 34 ಸಾವಿರ ದೇವಾಲಯಗಳಲ್ಲಿರುವ ಚಿನ್ನ ಬೆಳ್ಳಿ ಆಭರಣಗಳ ದಾಖಲೀಕರಣಕ್ಕೆ ಇಲಾಖೆ ಮುಂದಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸುತ್ತೋಲೆ ಕಳುಹಿಸಿದ್ದಾರೆ.
ರಾಜಮಹಾರಾಜರ ಕಾಲದಿಂದ ಇರುವ ದೇವಾಲಯಗಳು ರಾಜ್ಯದಲ್ಲಿ ಬಹಳಷ್ಟು ಇವೆ. ಇಂತಹ ದೇವಾಲಗಳಲ್ಲಿ ಭಾರೀ ಪ್ರಮಾಣದ ಆಭರಣಗಳಿದ್ದು ಆದಾಯದ ಆಧಾರದ ಮೇಲೆ ಎ, ಬಿ ಮತ್ತು ಸಿ ಎಂದು ವಿಂಗಡಿಸಲು ಇಲಾಖೆ ನಿರ್ಧರಿಸಿದೆ. ಅಲ್ಲದೆ ಪ್ರತಿ ತಾಲೂಕಿಗೆ ಒಬ್ಬರಂತೆ ಅಕ್ಕಸಾಲಿಗರು ಮತ್ತು ವಿಡಿಯೋಗ್ರಾಫರ್ ನೇಮಿಸಲು ನಿರ್ಧರಿಸಿದ್ದು, ತಹಸಿಲ್ಧಾರ್ ಸಮ್ಮುಖದಲ್ಲಿ ಆಭರಣಗಳ ಲೆಕ್ಕಾಚಾರ ನಡೆಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿನ ದೇವಾಲಯಗಳ ದಾಖಲೀಕರಣ ಮುಗಿಸಿರುವ ಇಲಾಖೆ ಜಿಲ್ಲೆಯಲ್ಲಿ ಸುಮಾರು 18 ಕೋಟಿ ರು. ಮೌಲ್ಯದ ಆಭರಣಗಳಿಗೆ ಎಂದು ವರದಿ ಮಾಡಿದೆ.
ಆದಾಯದ ದೃಷ್ಟಿಯಲ್ಲಿ ರಾಜ್ಯದ ಮೊದಲ ಏಳು ದೇವಾಲಯಗಳ ಪಟ್ಟಿ ಇಂತಿದೆ:
1. ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕು ಕುಕ್ಕೆ ಸುಬ್ರಮಣ್ಯ ಸ್ವಾಮಿ ದೇವಾಲಯ.
2. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಮಲೈ ಮಹದೇಶ್ವರ ಸ್ವಾಮಿ ದೇವಾಲಯ.
3. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕೊಲ್ಲೂರು ಮೂಕಾಂಬಿಕೆ ದೇವಾಲಯ.
4. ಮೈಸೂರು ಜಿಲ್ಲೆ ಚಾಮುಂಡೇಶ್ವರಿ ದೇವಾಲಯ.
5. ಮೈಸೂರು ಜಿಲ್ಲೆ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ.
6. ಮಂಡ್ಯ ಜಿಲ್ಲೆ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ.
7. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ.












Click it and Unblock the Notifications