ಪ್ರಾಣಿಗಳಿಗೂ ಚಿತಾಗಾರ, ಬಿಬಿಎಂಪಿ ಹೊಸ ಅವತಾರ

ಸಾಕುಪ್ರಾಣಿಗಳ ಸಾವಿನ ನೋವಿಗಿಂತ ಅವುಗಳ ಅಂತಿಮ ಸಂಸ್ಕಾರ ನಡೆಸಲು ಸೂಕ್ತ ಸ್ಥಳಾವಕಾಶ ದೊರೆಯದೆ ಮಾಲೀಕರು ಒದ್ದಾಡುವ ಪರಿಸ್ಥಿತಿಗೆ ಇನ್ನೂ ಮುಕ್ತಿ ದೊರೆತ ಹಾಗೆ ಎನ್ನಬಹುದು.
ಕೆಲವರು ಮೃತ ಪ್ರಾಣಿಯನ್ನು ಮನೆ ಹಿಂಬದಿಯಲ್ಲಿ ಮಣ್ಣು ಮಾಡಿದರೆ, ಕೆಲವರು ದಿನಾ ಬೆಳಗ್ಗೆ ಮನೆಗೆ ಬರುವ ಕಸ ಆರಿಸುವವರಿಗೆ ನೀಡಿ ಕೈತೊಳೆದುಕೊಳ್ಳುತ್ತಾರೆ. ಅವರಾದರೋ, ಅದನ್ನು ನಗರ ಯಾವುದಾದರೂ ದೊಡ್ಡ ಮೋರಿಗೆ ಎಸೆದು ಸುಮ್ಮನಾಗುತ್ತಾರೆ.
ಈ ಎಲ್ಲಾ ಕಷ್ಟ ಕೋಟಲೆಗಳನ್ನು ನಿವಾರಿಸಿ, ಪ್ರಾಣಿಗಳಿಗೂ ಅಂತಿಮ ವಿದಾಯದ ಹಕ್ಕು ನೀಡಬೇಕೆಂದು ಮೇಯರ್ ಎಸ್ ಕೆ ನಟರಾಜ್ ನೇತೃತ್ವದ ತಂಡ ತೀರ್ಮಾನಿಸಿದೆ. ಜಾಲಹಳ್ಳಿ ಬಳಿ ಐದು ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಇನ್ನು 15 ದಿನಗಳಲ್ಲಿ ಯೋಜನೆಯ ಪೂರ್ತಿ ರೂಪು ರೇಷೆ ಹೊರ ಬೀಳಲಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬೀದಿ ನಾಯಿಗಳು ಕಾಯಿಲೆ ಬಂದೋ ಅಥವಾ ಆಯಸ್ಸು ಮುಗಿದೋ ಸಾವನ್ನಪ್ಪಿ ಅದರ ಶವ ಚರಂಡಿಗಳಲ್ಲಿ ಬಿದ್ದು ಕೊಳೆತು ನಾನಾ ರೋಗಗಳನ್ನು ಹರಡುತ್ತಿದೆ ಎಂದು ಪರಿಸರ ತಜ್ಞರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಪ್ರಾಣಿ ಚಿತಾಗಾರಕ್ಕೆ ಸುಮಾರು 2.5 ಕೋಟಿ ರುಗಳನ್ನು ಬಿಬಿಎಂಪಿ ಖರ್ಚುಮಾಡುತ್ತಿದೆ. ಒಂದು ದಿನಕ್ಕೆ ಸುಮಾರು 15 ರಿಂದ 20 ಪ್ರಾಣಿಗಳ ಅಂತಿಮ ಸಂಸ್ಕಾರ ನೆರವೇರಿಸಬಹುದಾಗಿದೆ. ಪ್ರತಿ ಸಂಸ್ಕಾರಕ್ಕೂ ಪ್ರತ್ಯೇಕ ವೆಚ್ಚ ನಿಗದಿಪಡಿಸಲಾಗಿದ್ದು, 250 ರುಪಾಯಿಯಿಂದ 1000 ರುವರೆಗೂ ಇದೆ.
ಇಷ್ಟೇ ಅಲ್ಲದೆ, ಚಿತಾಗಾರಕ್ಕೆ ಹೊಂದಿಕೊಂಡಂತೆ ನಿಗೂಢ ಸಾವನ್ನಪ್ಪಿದ ಪ್ರಾಣಿಗಳ ಮರಣೋತ್ತರ ಚಿಕಿತ್ಸೆ ನಡೆಸಲು ಕೂಡ ಬಿಬಿಎಂಪಿ ಮುಂದಾಗಿದೆ. ಅಪಾಯಕಾರಿ ಕಾಯಿಲೆಯಿಂದ ಬಹುತೇಕ ಪ್ರಾಣಿಗಳು ಸಾವನ್ನಪ್ಪುವುದರಿಂದ ಎಲೆಕ್ಟ್ರಿಕ್ ಚಿತಾಗಾರ ಅತ್ಯುತ್ತಮ ವಿಧಾನ. ಇದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎನ್ನುತ್ತಾರೆ ಪರಿಸರವಾದಿ ಎಸ್ ಗಿರೀಶ್.












Click it and Unblock the Notifications