ಭಾನುವಾರ ಟ್ರಾಫಿಕ್ ಜಾಮಿಗೆ ಸಿದ್ಧರಾಗಿ

ಬೆಂಗಳೂರಿಂದ ಆರಂಭವಾಗಿ ಬಳ್ಳಾರಿಯಲ್ಲಿ ಕೊನೆಗೊಳ್ಳುವ ಈ ಪಾದಯಾತ್ರೆ ಒಟ್ಟು 300 ಕಿಲೋಮೀಟರುಗಳನ್ನು ಕ್ರಮಿಸಲಿದೆ. 16 ದಿವಸಗಳ ಯಾತ್ರೆ ಆಗಸ್ಟ್ 9 ರಂದು ಬಳ್ಳಾರಿಯಲ್ಲಿ ವಿಲೀನವಾಗುತ್ತದೆ. ಬಳ್ಳಾರಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ಕೇಂದ್ರದ ಹಾಗೂ ರಾಜ್ಯ ಅನೇಕ ಕಾಂಗ್ರೆಸ್ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾತ್ರೆಯಲ್ಲಿ ಭಾಗವಹಿಸುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ವತಿಯಿಂದ 'ಸರ್ಟಿಫಿಕೇಟ್' ನೀಡಲಾಗುತ್ತದೆ.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಐದು ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಾರ್ಗದುದ್ದಕ್ಕೂ ಸಾರ್ವಜನಿಕ ಸಭೆ ನಡೆಸಿ ಜನರಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ಜನಜಾಗೃತಿ ಮೂಡಿಸುವ ಆಂದೋಳನ ನಡೆಯಲಿದೆ. ಸಭೆ ಮತ್ತು ಪಾದಯಾತ್ರೆಯುದ್ದಕ್ಕೂ ಯಾವುದೇ ಅಡಚಣೆ ಬಂದರೂ ಅದಕ್ಕೆ ರೆಡ್ಡಿ ಸಹೋದರರೇ ನೇರ ಹೊಣೆಯಾಗುತ್ತಾರೆ, ಅಲ್ಲದೆ ಯಾತ್ರೆಯನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಪಾದಯಾತ್ರೆ ಹಾದುಹೋಗುವ ರಸ್ತೆಯುದ್ದಕ್ಕೂ ಸೂಕ್ತ ಭದ್ರತೆ ಕಲ್ಪಿಸುವಂತೆ ಕಾಂಗ್ರೆಸ್ ನಾಯಕರು ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಪಾದಯಾತ್ರೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಲು ಪೊಲೀಸರು ಸಜ್ಜಾಗಿದ್ದಾರೆ. ಪಾದಯಾತ್ರೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪೋಲಿಸ್ ಇಲಾಖೆ ನಿರ್ಧರಿಸಿದೆ.
ಪಾದಯಾತ್ರೆ ಹಾದುಹೋಗುವ ಮಾರ್ಗಗಳು : ಸ್ವಾತಂತ್ರ್ಯ ಯೋಧರ ಪಾರ್ಕ್, ಆನಂದ್ ರಾವ್ ವೃತ್ತ, ಶೇಷಾದ್ರಿಪುರಂ ವೃತ್ತ, ಮಂತ್ರಿ ಮಹಲ್, ಮಲ್ಲೇಶ್ವರಂ, ಯಶವಂತಪುರ,ಎಪಿಎಂಸಿ, ಗೊರುಗುಂಟೆಪಾಳ್ಯ, ಪೀಣ್ಯ, ದಾಸರಹಳ್ಳಿ, ನೆಲಮಂಗಲ, ಟಿ. ಬೇಗೂರು, ಕುಲವನಹಳ್ಳಿ, ದಾಬಸ್ ಪೇಟೆ, ಎಚ್ ಎಂ ಎಸ್ ಕಾಲೋನಿ, ತುಮಕೂರು, ಕಳ್ಳಂಬೆಳ್ಳ, ಶಿರಾ, ತಾವರಕೆರೆ, ಐವನಗೊಂಡನಹಳ್ಳಿ, ಬಗ್ಗನಾಡು, ಹಿರಿಯೂರು, ಗೊಲ್ಲಹಳ್ಳಿ, ತಳಕು, ಹಿರೇಹಳ್ಳಿ, ಕೋನಸಾಗರ, ಹಾನಗಲ್, ಆಮಕುಂದಿ, ರಾಮಪುರ, ಕಣಕುಪ್ಪ, ಮುಂಡರಗಿ ಮಾರ್ಗವಾಗಿ ಬಳ್ಳಾರಿಗೆ ಪಾದಯಾತ್ರೆ ತೆರಳಿದೆ ಎಂದು ಕೆಪಿಸಿಸಿ ತಿಳಿಸಿದೆ.












Click it and Unblock the Notifications