ಶಿಬುಲಾಲ್ ಇನ್ಫಿಯ ಮುಂದಿನ ಸಿಇಒ: ಮೂರ್ತಿ
ಸಿಒಒ ಆಗಿ ಶಿಬುಲಾಲ್ ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲ ಇನ್ಫೊ ಬೋರ್ಡ್ ಸದಸ್ಯರೆಲ್ಲರ ಅಭಿಮತವೂ ಒಂದೇ ಆಗಿದೆ ಎಂದು ಎನ್ ಡಿಟಿವಿ ಫ್ರಾಫಿಟ್ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ನಾರಾಯಣಮೂರ್ತಿ ಹೇಳಿದರು.
ಇನ್ಫೋಸಿಸ್ ಗೆ ನಿಮ್ಮ ಮಗ ಸೇರುತ್ತಾರೆ ಎಂಬ ಸುದ್ದಿ ಇದೆಯಲ್ಲ ನಿಜವೇ ಎಂದು ಪ್ರಶ್ನಿಸಿದಾಗ, ಸೇರುವ ಸಾಧ್ಯತೆ ಇದೆ ಎಂದು ನಾನೇ ಹೇಳಿದ್ದೆ ಆದರೆ, ನೇಮಕಾತಿ ಸದ್ಯಕ್ಕಂತೂ ಇಲ್ಲ ಎಂದಿದ್ದಾರೆ.
2014ರ ವೇಳೆಗೆ ಇನ್ಫೋಸಿಸ್ ನ ಆಡಳಿತ ಮಂಡಳಿಯ ಬಹುತೇಕ ಹಿರಿಯ ಸದಸ್ಯರಿಗೆ ನಿವೃತ್ತಿ ಸಿಗುವುದರಿಂದ ಹೊಸ ಪಡೆ ನಿರ್ಮಾಣಕ್ಕೆ ಇನ್ಫಿ ಮುಂದಾಗಿದೆ. ಇದಕ್ಕೆ ಪೂರಕವಾಗಿ ಯುವ ಉದ್ಯೋಗಿಗಳನ್ನು ನೇಮಿಸಿಕೊಂಡು ಹೊಸ ಪಡೆ ಬಲಪಡಿಸುವುದರ ಬಗ್ಗೆ ಜಾಗತಿಕ ಮಾನವ ಸಂಪನ್ಮೂಲ ಅಧಿಕಾರಿ ನಂದಿತಾ ಗುರ್ಜಾರ್ ಹೇಳಿದ್ದರು.
ಆದರೆ, ಕಂಪೆನಿಯ ಒಳಮೂಲಗಳ ಪ್ರಕಾರ ಹಿರಿ ತಲೆಗಳು ಬದಲಾದ ಮೇಲೆ ಮುಂಬರುವ ಯುವ ಅಧಿಕಾರಿಗಳ ಪಟ್ಟಿ ಸಿದ್ಧವಾಗಿ ಎರಡುವರ್ಷವೇ ಕಳೆದಿದೆ. ಸೂಕ್ತ ಸಮಯದಲ್ಲಿ ನೇಮಕಾತಿ ಹಾಗೂ ಪ್ರಕಟಣೆ ಹೊರಡಲಿದೆ ಎನ್ನಲಾಗಿದೆ.
ಶಿಬುಲಾಲ್ ಅಲ್ಲದೆ ಇನ್ನೂ ಅನೇಕ ಸಮರ್ಥ ನಾಯಕರು ಇನ್ಫೋಸಿಸ್ ನಲ್ಲಿದ್ದು, ಹೊಸ ಪೀಳಿಗೆಯ ಆಡಳಿತ ಆರಂಭಕ್ಕೆ ಮುನ್ನ ಅಂದರೆ ಸುಮಾರು ಇನ್ನು ಆರು ವರ್ಷಗಳ ಕಾಲ ಹಿರಿಯ ರ ಮಾರ್ಗದರ್ಶನದಲ್ಲೇ ಇನ್ಫೋಸಿಸ್ ಆಡಳಿತ ನಡೆಯಲಿದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.