ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಅಗ್ನಿ ಆಕಸ್ಮಿಕ
ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬಂದು ಬೆಂಕಿ ನಂದಿಸಿದ ಪರಿಣಾಮ ಯಾವುದೇ ಸಾವು ನೋವುಗಳು ಸಂಭವಿಸಲಿಲ್ಲ. ಸುದ್ದಿ ತಿಳಿದ ತಕ್ಷಣ ಕಟ್ಟಡವನ್ನು ತೆರವುಗೊಳಿಸುವಂತೆ ಟೆಕ್ಕಿಗಳಿಗೆ ಸೂಚನೆ ನೀಡಲಾಯಿತು.
ಟೆಕ್ಕಿಗಳು ಕೂಡಾ ತಕ್ಷಣವೇ ಸ್ಪಂದಿಸಿದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ಅಗ್ನಿಶಾಮಕದಳದ ಉತ್ತರ ವಿಭಾಗದ ಅಧಿಕಾರಿ ಟಿಎನ್ ಶಿವಶಂಕರ್ ಹೇಳಿದರು.
ಶಾರ್ಟ್ ಸರ್ಕ್ಯೂಟ್ ನ ಕಾರಣದಿಂದ ಬೆಳಗ್ಗೆ ಬೆಂಕಿ 9.45 ಗಂಟೆ ಸುಮಾರಿಗೆ ಹೊತ್ತಿಕೊಂಡ ಕಿಡಿ ಎಲೆಕ್ಟ್ರಿಕ್ ಪ್ಯಾನೆಲ್ ರೂಂ ಪೂರ್ತಿ ಆವರಿಸಿ, ಇಡೀ ವಾತಾವರಣವನ್ನು ಹೊಗೆಯಿಂದ ತುಂಬಿಸಿಬಿಟ್ಟಿತು. ಸುಮಾರು 30ಕ್ಕೂ ಹೆಚ್ಚು ಯುಪಿಎಸ್ ಗಳನ್ನು ಬಲಿತೆಗೆದುಕೊಂಡ ಬೆಂಕಿಯ ಕೆನ್ನಾಲಿಗೆಯನ್ನು ತಣಿಸಲು ಸುಮಾರು ಆರು ಅಗ್ನಿಶಾಮಕ ವಾಹನಗಳು ಸಾಹಸ ಪಡಬೇಕಾಯಿತು.
ಫೆಬ್ರವರಿಯಲ್ಲಿ ನಡೆದ9 ಜನರನ್ನು ಬಲಿ ತೆಗೆದುಕೊಂಡ ಕಾರ್ಲ್ಟನ್ ಟವರ್ಸ್ ಅಗ್ನಿ ದುರಂತದ ನಂತರ ಎಲ್ಲಾ ಪ್ರಮುಖ ಟೆಕ್ ಪಾರ್ಕ್ ಗಳ ಕಂಪೆನಿಗಳಿಗೆ ಅಗ್ನಿಶಾಮಕದಳದವರು ಸುರಕ್ಷತೆಯ ಪಾಠ ಹೇಳಿದ್ದರು.