ನಕಲಿ ಕ್ರೆಡಿಟ್ ಕಾರ್ಡ್, ನೋಟು ಜಾಲ ಬಯಲು

ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅವರು ಶುಕ್ರವಾರ ವಿವರ ನೀಡಿದ್ದು, ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ನಕಲಿ ನೋಟು ಜಾಲಗಳ್ಳರಿಂದ 16 ಲಕ್ಷ ರು. ಮೊತ್ತದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರೆ, ನಕಲಿ ಕ್ರೆಡಿಟ್ ಕಾರ್ಡ್ ಮೋಸದಿಂದ ಒಟ್ಟು 50 ಲಕ್ಷ ರು.ಯಷ್ಟು ವಂಚನೆ ಮಾಡಿದ್ದು ಬಯಲಾಗಿದೆ.
ನಕಲಿ ಕ್ರೆಡಿಟ್ ಕಾರ್ಡ್ : ಈ ಪ್ರಕರಣದಲ್ಲಿ ಜಯಕುಮಾರ್ ಸ್ಯಾಮ್ಯುಯೆಲ್ ಮತ್ತು ಹರೀಶ್ ಅಲಿಯಾಸ್ ಸ್ಟೀವನ್ ಎಂಬಿಬ್ಬರನ್ನು ಬಂಧಿಸಲಾಗಿದ್ದು, ಅವರಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ಯಾಂಕುಗಳ 205 ಕ್ರೆಡಿಟ್ ಕಾರ್ಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರು ನಕಲಿ ಬ್ಯಾಂಕ್ ಕ್ರೆಡಿಟ್ ಕಾರ್ಡುಗಳನ್ನು ಸೃಷ್ಟಿಸಿ 50 ಲಕ್ಷ ರು.ಗೂ ಹೆಚ್ಚಿನ ವಸ್ತುಗಳನ್ನು ಕೊಂಡಿದ್ದಾರೆ ಮತ್ತು ಸೇವೆಗಳನ್ನು ಪಡೆದು ಕ್ರೆಡಿಟ್ ಕಾರ್ಡ್ ಮಾಲಿಕರನ್ನು ವಂಚಿಸಿದ್ದಾರೆ.
ಇವರಲ್ಲಿ ಜಯಕುಮಾರ್ ತಮಿಳುನಾಡಿನವನಾಗಿದ್ದು, ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಡಿಪಾರ್ಟ್ ಮೆಂಟ್ ಸ್ಟೋರ್ ನಡೆಸುತ್ತಿದ್ದ. ಅಲ್ಲಿ ನಷ್ಟವಾಗಿದ್ದರಿಂದ ಶ್ರೀಲಂಕಾದ ಶ್ರೋತಿ ಎಂಬಾತನ ಸ್ನೇಹ ಸಂಪಾದಿಸಿ ಈ ದಂಧೆಗಿಳಿದಿದ್ದ. ಶ್ರೋತಿ ಮಲೇಶಿಯಾ ಮತ್ತು ಸಿಂಗಪುರದಲ್ಲಿ ಇದೇ ವ್ಯಾಪಾರ ನಡೆಸುತ್ತಿದ್ದಾನೆ.
ಖೋಟಾ ನೋಟಿನ ಜಾಲ : ಖೋಟಾ ನೋಟುಗಳನ್ನು ಮುದ್ರಿಸಿ ವಂಚಿಸುತ್ತಿದ್ದ ಪಶ್ಚಿಮ ಬಂಗಾಳದ ಚೋರಿಯಾನಂದಪುರ ಗ್ರಾಮದ ಅನ್ರೂಲ್ ಶೀಕ್ ಅಲಿಯಾಸ್ ಸಲೀಮ್ ಮತ್ತು ತಮಿಳುನಾಡಿನ ಅಲಗಪುರಿಯ ಬಾಬು ಅಲಿಯಾಸ್ ದುಬೈ ಬಾಬು ಎಂಬಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ 1000 ರು ಮತ್ತು 500 ರು. ಮೊತ್ತದ 16 ಲಕ್ಷ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಥಮ ಮಾಹಿತಿಯ ಪ್ರಕಾರ, ಈ ನೋಟುಗಳು ಪಾಕಿಸ್ತಾನದಲ್ಲಿ ಮುದ್ರಿಸಲಾಗಿದ್ದು, ಬಾಂಗ್ಲಾದೇಶದ ಮುಖಾಂತರ ನಮ್ಮ ದೇಶವನ್ನು ಪ್ರವೇಶಿಸಿವೆ. ವಂಚಕರು 40 ಸಾವಿರ ರು. ಮೊತ್ತದ ಅಸಲಿ ನೋಟುಗಳ ಜೊತೆಗೆ 1 ಲಕ್ಷ ರು. ಮೊತ್ತದ ನಕಲಿ ನೋಟುಗಳನ್ನು ಬೆರೆಸುತ್ತಿದ್ದರು ಎಂದು ಶಂಕರ್ ಬಿದರಿ ತಿಳಿಸಿದರು.
ಬೆಂಗಳೂರು ಪೊಲೀಸರಿಗೆ ಒಂದು ಶಭಾಸ್ ಗಿರಿ ನೀಡೋಣವೆ?











Click it and Unblock the Notifications