ಎಂಇಎಸ್ ಪುಂಡರನ್ನು ಬಂಧಿಸಲು ಕರವೇ ಆಗ್ರಹ
ಕನ್ನಡ ನಾಮಫಲಕಗಳನ್ನು ಧ್ವಂಸಗೊಳಿಸುತ್ತಾ, ಕನ್ನಡಿಗರು ಮತ್ತು ಕರ್ನಾಟಕವನ್ನು ಹೀಯಾಳಿಸುವ ಘೋಷಣೆ ಕೂಗುತ್ತಾ, ಮೆರವಣಿಗೆ ಸಾಗಿದ ಎಂಇಎಸ್ ಕಾರ್ಯಕರ್ತರು .ಕಲಘಟಕಿ ಶಾಸಕ ಸಂತೋಷ್ ಲಾಡ್ ಕಟ್ ಔಟ್ ನಾಶ ಮಾಡಿ, ಪೋಲೀಸರ ಮೇಲೆ ಚಪ್ಪಲಿ, ಕಲ್ಲು, ಸೋಡಾ ಬಾಟಲಿ ಎಸೆತ, ಕನ್ನಡ ಧ್ವಜವನ್ನು ಕಿತ್ತು, ತುಳಿದು ಮಹಾರಾಷ್ಟ್ರ ಧ್ವಜ ಹಾರಿಸುವ ಪ್ರಯತ್ನಪಟ್ಟರು.
ಸೋಮವಾರ (ಜು 12) ನಡೆಸಿದ ಪ್ರತಿಭಾಟನಾ ಮೆರವಣಿಗೆಯಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ಜನರನ್ನು ಸೇರಿಸಲು ವಿಫಲವಾದ ಎಂಇಎಸ್ ಬಾಡಿಗೆ ಬಂಟರಿಗೆ ಮೊರೆಹೋಗಿತ್ತು.
ಕೇಂದ್ರ ಸರಕಾರ ಸಲ್ಲಿಸಿದ್ದ ಪ್ರಮಾಣ ಪತ್ರದ ವಿರುದ್ದ ಎಂಇಎಸ್ ಪ್ರತಿಭಟನಾ ಮೆರವಣಿಗೆ ನಡೆಸಿತು. ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಬರುತ್ತಿದ್ದಂತೆ ಕನ್ನಡ ಧ್ವಜ ಇಳಿಸಿ ಮಹಾರಾಷ್ಟ್ರ ಧ್ವಜ ಹಾರಿಸಲು ಕಾರ್ಯಕರ್ತರು ಪ್ರಯತ್ನಿಸಿದರು. ಕನ್ನಡ ಧ್ವಜಕ್ಕೆ ಕೈಹಾಕಿದ ಕೂಡಲೇ ಲಾಠಿ ಪ್ರಹಾರ ಆರಂಭಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು.
ಎಂಇಎಸ್ ಗೆ ಮುಖಭಂಗ: ಈ ಸಂಧರ್ಭದಲ್ಲಿ ತೀವ್ರ ಪ್ರತಿಭಟನೆ ಆರಂಭಿಸಿದ ಕನ್ನಡ ಪರ ಸಂಘಟನೆಗಳು ಮತ್ತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಧ್ವಜವನ್ನು ಹಾರಿಸಿದರು. ನಗರದ ಪ್ರಮುಖ ಬೀದಿಗಳಲ್ಲಿದ್ದ ಭಗವಾಧ್ವಜ ಕಿತ್ತೆಸೆದ ಕರವೇಯ ಎರಡೂ ಬಣದ ಕಾರ್ಯಕರ್ತರು ಮತ್ತೆ ಕನ್ನಡ ಧ್ವಜ ಹಾರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸ್ವಾಭಿಮಾನ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ. ಇದರಿಂದ ಎಂಇಎಸ್ ಮತ್ತೆ ಮುಖಭಂಗ ಅನುಭವಿಸುವಂತಾಯಿತು.
ಎರಡೂ ರಾಜ್ಯಗಳ ಗಡಿ ವಿವಾದ ಕಾವೇರಿರುವ ಬೆನ್ನಲ್ಲೇ ಮಹಾರಾಷ್ಟ್ರ ಕರ್ನಾಟಕಕ್ಕೆ ತನ್ನ ಬಸ್ ಸೇವೆಯನ್ನು ಎರಡು ದಿನ ರದ್ದು ಪಡಿಸಿದೆ. ಮುಂಬಯಿನಿಂದ ಬೆಳಗಾವಿಗೆ ಹೊರಟಿದ್ದ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಬಸ್ ಮೇಲೆ ಕಿಡಿಗೇಡಿಗಳು ಪುಣೆಯ ಬಳಿ ಬೆಂಕಿ ಹಚ್ಚಿದ್ದಾರೆ, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಬಸ್ ಗಳ ಮೇಲೆ ಬೆಂಕಿ ಹಚ್ಚಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.