ಸಾಕ್ಷಾತ್ ರಣಾಂಗಣವಾದ ವಿಧಾನಸಭೆ
ವಿಧಾನಸಭೆ ಶುಕ್ರವಾರ ಸಾಕ್ಷಾತ್ ಕುಸ್ತಿಯ ಅಖಾಡವಾಗಿ ಪರಿವರ್ತಿತವಾಗಿತ್ತು. ಕೆಲವರು ತೋಳೇರಿಸಿದರು, ಕೆಲವರು ತೊಡೆತಟ್ಟಿದರು, ಇನ್ನು ಕೆಲವರು ರಟ್ಟೆ ತಟ್ಟುತ್ತ ಕುಸ್ತಿಗೆ ಆಹ್ವಾನ ನೀಡುತ್ತಿದ್ದರು. ಈಡಿಯಟ್ಸ್, ಲೋಫರ್ಸ್... ಮುಂತಾದ ಅವಾಚ್ಯ ಶಬ್ದಗಳಿಂಗಂತೂ ಬರವೇ ಇರಲಿಲ್ಲ.
ಯಾರಿಗೂ ಕಡಿಮೆಯಿಲ್ಲದಂತೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೈಕೈ ಮಿಲಾಯಿಸಿದರು. ಆರೋಗ್ಯಕರ ಚರ್ಚೆಗೆ ವೇದಿಕೆ ಕಲ್ಪಿಸಬೇಕಾಗಿದ್ದ ಸದನ, ಬದ್ಧ ವೈರಿಗಳು ಕಾದಾಡುವ ರಣಾಂಗಣವಾಗಿತ್ತು.
ನಡೆದದ್ದಿಷ್ಟು : ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿರುವ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವರ ನೀಡುತ್ತಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಉತ್ತರವನ್ನು ಅರ್ಧಕ್ಕೆ ನಿಲ್ಲಿಸಿ, ಮುಂದೆ ಮಾತಾಡಲು ಗಣಿಧಣಿ ಜನಾರ್ಧನ ರೆಡ್ಡಿಗೆ ಅವಕಾಶ ಮಾಡಿಕೊಟ್ಟರು.
ಇದರಿಂದ ಕೆರಳಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಈ ಹಗರಣಕ್ಕೆ ಮುಖ್ಯಮಂತ್ರಿಯೇ ಸಂಪೂರ್ಣ ಉತ್ತರ ನೀಡಬೇಕು ಮತ್ತು ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಬೇಕು ಎಂದು ಪಟ್ಟುಹಿಡಿದರು. ಅವರೂ ಒಪ್ಪಲಿಲ್ಲ, ಇವರೂ ಕೈಬಿಡಲಿಲ್ಲ. ಕೊನೆಗೆ ವಿರೋಧ ಪಕ್ಷದವರು ಸದನದ ಬಾವಿಗೆ ನುಗ್ಗಿ ವಿರೋಧ ವ್ಯಕ್ತಿಪಡಿಸಿದರು.
ಮುಂದಿನ ಕಾಳಗದ ವಾಸನೆ ಗ್ರಹಿಸಿದ ಸಭಾಧ್ಯಕ್ಷರು ಸದನವನ್ನು ಮುಂದೂಡಿದರು. ನಂತರ ಶುರುವಾದದ್ದೇ ರಣಯುದ್ಧ. ಸದನದಲ್ಲೇ ಬಳ್ಳಾರಿಯನ್ನು ತಂದಿರಲ್ಲ ಎಂದು ದಿನೇಶ್ ಗುಂಡೂರಾವ್ ಅವರು ರೆಡ್ಡಿಗಳ ಕುರಿತು ಆಡಿತ ಮಾತು ರೆಡ್ಡಿ ಸಹೋದರರನ್ನು ತೀವ್ರವಾಗಿ ಕೆರಳಿಸಿತು. ಈಡಿಯಟ್ಸ್, ಲೋಫರ್ಸ್, ರೌಡಿಗಳಾ, ಗೆಟೌಟ್ ಎಂಬ 'ನಯವಾದ' ಮಾತುಗಳು ಎಲ್ಲೆಂದರಲ್ಲಿ ಹಾರಾಡಲು ಶುರು ಮಾಡಿದವು. ಕೆಲವರು ಕೈಕೈ ಮಿಲಾಯಿಸುವ ಹಂತಕ್ಕೂ ಇಳಿದರು.
ಐವರ ವಿರುದ್ಧ ದೂರು : ಅವಾಚ್ಯ ಶಬ್ದಗಳನ್ನು ಬಳಸಿದ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ, ಸುರೇಶ್ ಬಾಬು ಮುಂತಾದ ಐವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಪಕ್ಷ ಸಭಾಧ್ಯಕ್ಷರಿಗೆ ದೂರು ನೀಡಿದೆ.