ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚಾನಾ ಪರಮಾತ್ಮನು!
ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸ್ವಂತ ವಾಹನವನ್ನು ಬಳಸದೆ, ಸಾಮೂಹಿಕ ಸಾರಿಗೆಯನ್ನು ಇಲ್ಲವೇ ಕಾಲೇಜು ಆಡಳಿತ ಮಂಡಳಿ ನಿಯೋಜಿಸಿರುವ ಬಸ್ಸಿನಲ್ಲಿ ಮಾತ್ರ ಬರಬೇಕು ಎಂಬ ನೋಟಿಸ್ ನೀಡಿರುವುದು ರಾಜ್ಯಾದ್ಯಂತ ವ್ಯಾಪಕ ಪರ-ವಿರೋಧ ವ್ಯಕ್ತವಾಗಿದೆ. ಉಳ್ಳವರ ಮಕ್ಕಳಿಗೆ ಕುಲಪತಿಗಳ ಹೊಸ ನೋಟಿಸ್ ಕಿರಿಕಿರಿ ಎನಿಸಿದ್ದು, ತಿರುಗಿ ಬಿದ್ದಿರುವ ವಿದ್ಯಾರ್ಥಿಗಳು ಕುಲಪತಿಗಳು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ ಎಂಬ ಪ್ರಶ್ನೆಯನ್ನು ಎಸೆದಿದ್ದರು.
ವಿದ್ಯಾರ್ಥಿಗಳ ಈ ಪ್ರಶ್ನೆಯನ್ನು ಸವಾಲಾಗಿ ಸ್ವೀಕರಿಸಿದ ಕುಲಪತಿ ಮಹೇಶಪ್ಪ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವುದು ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಮಹೇಶಪ್ಪ, ಇದು ನನ್ನ ಕನಸಿನ ಕೂಸು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆನ್ನು ಹೋಗಲಾಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಜೊತೆಗೆ ವಿದ್ಯಾರ್ಥಿಗಳ ರಕ್ಷಣೆ ನಮ್ಮ ಮೇಲಿದೆ. ನನ್ನ ಕೂಸಿಗೆ ವಿದ್ಯಾರ್ಥಿಗಳಿಂದ ಭಾರಿ ವಿರೋಧ ವ್ಯಕ್ತವಾಯಿತು. ಇಷ್ಟಕ್ಕೆ ಸುಮ್ಮನಾಗದ ಅವರು, ನನ್ನನ್ನು ಕೂಡಾ ಬಸ್ಸಿನಲ್ಲಿ ಬರವಂತೆ ಪ್ರೇರೆಪಿಸಿದರು.
ವಿದ್ಯಾರ್ಥಿಗಳ ಮಾತು ಸತ್ಯ. ವಿಶ್ವವಿದ್ಯಾಲಯದಿಂದ ಹೊರಡಿಸಲಾಗಿರುವ ನೂತನ ಕಾಯ್ದೆ ವಿದ್ಯಾರ್ಥಿಗಳಿಗೆ ಮಾತ್ರವವಲ್ಲ. ಪ್ಯಾಕಲ್ಟಿ ಹಾಗೂ ಕುಲಪತಿಗೂ ಆನ್ವಯಿಸುತ್ತದೆ. ಹೀಗಾಗಿ ನಾನು ಕೂಡ ಮುಂದಿನ ದಿನಗಳಲ್ಲಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತೇನೆ ಎಂದು ಮಹೇಶಪ್ಪ ವಿವರಿಸಿದ್ದಾರೆ. ನನ್ನ ಮಕ್ಕಳು ಕೂಡಾ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ನನ್ನ ಮಗ ಬಿಎಂಟಿಸಿ ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದರೆ, ಮಗಳು ಕಾಲೇಜಿನ ಬಸ್ಸಿನ ಹೋಗುತ್ತಿದ್ದಾಳೆ. ಇದರಿಂದ ಅಪಘಾತಗಳನ್ನು ತಪ್ಪಿಸಬಹುದು ಜೊತೆಗೆ ಮಾಲಿನ್ಯ ನಿಯಂತ್ರಣ ಸಾಧ್ಯ ಎಂದು ಅವರು ಹೇಳಿದರು.