ಗಣಿ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಿ : ಸಂತೋಷ ಹೆಗ್ಡೆ
ಅತ್ತ ಅಧಿವೇಶನದಲ್ಲಿ ಲೋಕಾಯುಕ್ತರ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಯಡಿಯೂರಪ್ಪನವರ ಸರಕಾರದ ಜೀವ ತಿನ್ನತೊಡಗಿದ್ದರೆ, ಇತ್ತ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಂತೋಷ ಹೆಗ್ಡೆ ನಂತರ ಸುದ್ದಿಗೋಷ್ಠಿ ನಡೆಸಿ ದಾಳಿಯ ವಿವರವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹೆಗ್ಡೆ, ನಾನು ಯಾವು ಕಾರಣಕ್ಕೂ ರಾಜೀನಾಮೆಯನ್ನು ವಾಪಸ್ ಪಡೆಯುದಿಲ್ಲ. ಸರಕಾರವನ್ನು ಬ್ಲ್ಯಾಕ್ ಮೇಲ್ ಮಾಡುವ ಅವಶ್ಯಕತೆ ನನಗಿಲ್ಲ. ಆದರೆ, ಬಳ್ಳಾರಿಯಲ್ಲಿ 11 ಗಣಿ ಕಂಪನಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿವೆ. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಇಲಾಖೆ ಸಮಗ್ರ ವರದಿಯನ್ನು ಸಲ್ಲಿಸಿದೆ. ಕಾನೂನು ಉಲ್ಲಂಘಿಸಿರುವ 11 ಗಣಿಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತೋಷ ಹೆಗ್ಡೆ ಒತ್ತಾಯಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ 2 ಗಣಿ ಕಂಪನಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಇಂದು ವಿಧಾನ ಪರಿಷತ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಹಾಗಾದರೆ ಉಳಿದ 9 ಕಂಪನಿಗಳ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲ 11 ಕಂಪನಿಗಳ ವಿರುದ್ಧವೂ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ದೇಶದ ಅಮೂಲ್ಯ ಸಂಪತ್ತು ಉಳಿಸಬೇಕು ಎಂದು ಹೆಗ್ಡೆ ಆಗ್ರಹಿಸಿದ್ದಾರೆ.
ತಿಮಿಂಗಲುಗಳಿಂದ 7.76 ಕೋಟಿ ವಶ
ಇಂದು ಬೆಳಗ್ಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಸುಮಾರು 7.76 ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳ್ಳಾರಿಯ ಎಆರ್ ಟಿಓ ಗುಟ್ಟಪ್ಪ, ಗುಲ್ಬರ್ಗಾದ ವೀರಯ್ಯಸ್ವಾಮಿ ಹಾಗೂ ನೀಲಕಂಠ ರಾಥೋಡ್, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎಆರ್ ಟಿಓ ಲಕ್ಷ್ಮಣ, ಬಿಬಿಎಂಪಿ ಕಂದಾಯ ಅಧಿಕಾರಿ ಕರಿಯಣ್ಣ, ಲಿಂಗರಾಜಪುರದ ಗ್ರಾಮ ಲೆಕ್ಕಿಗ ನಾಗೇಂದ್ರ ರೆಡ್ಡಿ ಲೋಕಾಯಕ್ತ ಬಲೆಗೆ ಬಿದ್ದ ತಿಮಿಂಗಲುಗಳು ಎಂದು ಸಂತೋಷ ಹೆಗ್ಡೆ ವಿವರಿಸಿದರು.