ಗಡೀಪಾರು, ಕತ್ತೆ ಮೆರವಣಿಗೆಗೆ ಬೆಂಗಳೂರಿನಲ್ಲಿ ಫತ್ವಾ
ಇದು ಒಂದು ಕೋಮಿನ ಮುಖಂಡರು ಆ ಮಹಿಳೆಯ ಮೇಲೆ ಮತ್ತು ಆಕೆಯ ಪಾಲಕರ ಮೇಲೆ ಹೇರಿರುವ ಫತ್ವಾ! ಇದು ಜಗತ್ತಿನ ಬೇರೆಲ್ಲೂ ನಡೆದಿಲ್ಲ. ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲೇ ನಡೆದಿರುವುದು.
ಇಷ್ಟಕ್ಕೂ ಆಕೆ ಮಾಡಿರುವ ತಪ್ಪಾದರೂ ಏನು? ಬಾಡಿಗೆಗಿದ್ದ ವ್ಯಕ್ತಿಯೊಂದಿಗೆ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಗಂಡ ತನ್ನ ಕೋಮಿನ ಮುಖಂಡರಿಗೆ ದೂರು ನೀಡಿರುವುದೇ ಆಕೆಯ ಮೇಲೆ ಫತ್ವಾ ಹೇರಲು ಮೂಲ ಕಾರಣ. ಮಹಿಳೆಯ ಪ್ರಕಾರ, ಆ ಬಾಡಿಗೆದಾರನೊಂದಿಗೆ ಮಹಿಳೆ ನೈತಿಕ, ಅನೈತಿಕ ಯಾವ ಸಂಬಂಧವನ್ನೂ ಹೊಂದಿಲ್ಲ.
ನಡೆದದ್ದೇನು? : ನುಸ್ರತ್ (ಹೆಸರು ಬದಲಾಯಿಸಲಾಗಿದೆ) 2005ರಲ್ಲಿ ಜಹಾಂಗೀರ್ (ಹೆಸರು ಬದಲಾಯಿಸಲಾಗಿದೆ) ಎಂಬಾತನೊಂದಿಗೆ ವಿವಾಹವಾಗಿದ್ದಾಳೆ. ಅವರಿಬ್ಬರೂ ಬೆಂಗಳೂರು ಪಶ್ಚಿಮದ ವಿದ್ಯಾರಣ್ಯಪುರದಲ್ಲಿ ವಾಸ್ತವ್ಯ ಹೂಡಿದ್ದಾರೆ. ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು ನಟರಾಜ್ ಎಂಬಾತ ಅವರಿದ್ದ ಕಟ್ಟಡಕ್ಕೆ ಬಾಡಿಗೆದಾರನಾಗಿ ಬಂದಾಗ.
ನುಸ್ರತ್ ಮತ್ತು ನಟರಾಜ್ ಮಧ್ಯೆ ಸಂಬಂಧವಿರಬಹುದೆ ಎಂದು ಜಹಾಂಗೀರ್ ಶಂಕಿಸಿದ್ದಾನೆ. ಆಕೆಯೊಡನೆ ವಿಷಯ ಪ್ರಸ್ತಾಪಿಸಿದಾಗ ನುಸ್ರತ್ ಅಲ್ಲಗಳೆದಿದ್ದಾಳೆ. ಆದರೂ ಆಕೆಯ ಮೇಲೆ ದೈಹಿಕ ದೌರ್ಜನ್ಯ ನಡೆಸಲು ಪ್ರಾರಂಭಿಸಿದ್ದಾನೆ ಜಹಾಂಗೀರ್. ಕೆಲಸಕ್ಕೆ ಹೋಗುವ ನೆಪ ಮಾಡಿ ಅವನಿಲ್ಲದಾಗ ನುಸ್ರತ್ ನಟರಾಜ್ ನೊಂದಿಗೆ ಸಂಧಿಸುತ್ತಾನೆ ಎಂಬುದನ್ನು ನೋಡುವುದೇ ಆತನ ದಿನನಿತ್ಯದ ಕಾಯಕವಾಯಿತು. ಇದನ್ನು ತಿಳಿಯುವುದಕ್ಕಾಗಿ ಚಿಕ್ಕಮಕ್ಕಳನ್ನು ಜಾಸೂಸಿ ಮಾಡಲು ಜಹಾಂಗೀರ್ ಬಿಟ್ಟಿದ್ದಾನೆ.
ಕೊನೆಗೆ, ಆತನ ದೌರ್ಜನ್ಯ ಮಿತಿಮೀರಿದಾಗ ತನ್ನ ಪಾಲಕರಿಗೆ ವಿಷಯ ತಿಳಿಸಿದ್ದಾಳೆ ನುಸ್ರತ್. ನಟರಾಜ್ ನನ್ನು ಮನೆಯಿಂದ ಬಿಡಿಸಿದರೂ ಗಂಡನ ಹಿಂಸೆ ನಿಂತಿಲ್ಲ. ರೋಸತ್ತು ಹೋಗಿ ಆಕೆ ರೈಲು ಹಳಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದು ಗೊತ್ತಾಗಿ ನಟರಾಜ್ ಆಕೆಯನ್ನು ರಾಯಚೂರಿಗೆ ಬಂಧುಗಳ ಬಳಿ ಓಡಿ ಹೋಗಲು ಪ್ರೇರೇಪಿಸಿದ್ದಾನೆ. ಇದನ್ನು ಗೊತ್ತು ಮಾಡಿಕೊಂಡ ಗಂಡ ಪುಸಲಾಯಿಸಿ ತನ್ನ ಧರ್ಮಗುರುಗಳ ಬಳಿಗೆ ತಂದು ನಿಲ್ಲಿಸಿದ್ದಾನೆ.
ನುಸ್ರತ್ ಮಾತನ್ನು ಒಪ್ಪದ ಧರ್ಮಗುರುಗಳು ಎಲ್ಲಜನರೆದುರಿಗೆ ಆಕೆಯ ಕಪಾಳಕ್ಕೆ ಬಿಗಿದಿದ್ದಾರೆ ಮತ್ತು ಮೂರು ದಿನಗಳಲ್ಲಿ ಊರು ಬಿಟ್ಟು ತೊಲಗುವಂತೆ ಆದೇಶ ನೀಡಿದ್ದಾರೆ. ಈ ದಬ್ಬಾಳಿಕೆಯನ್ನು ಸಹಿಸದ ನುಸ್ರತ್ ಗಂಡನ ವಿರುದ್ಧ ಮತ್ತು ಫತ್ವಾ ಹೊರಡಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಉಪ ಪೊಲೀಸ್ ಆಯುಕ್ತ ಎಚ್ಎಸ್ ರೇವಣ್ಣ ಅವರ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿದೆ. ಮಾನವ ಹಕ್ಕು ಆಯೋಗದ ಮುಂದೆಯೂ ದೂರು ಬಂದು ನಿಂತಿದೆ. ಮುಂದೇನು? Over to Justice Subray Rama Nayak, National Human Rights Commissioner, Karnataka.