ಸಾಂಬಾರ ರಾಣಿ ಏಲಕ್ಕಿಗೆ ಭಾರೀ ಬೇಡಿಕೆ

ಒಂದು ಕಾಲದಲ್ಲಿ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಗಾರರ ಜೀವನಾಡಿಯಾಗಿದ್ದ ಏಲಕ್ಕಿ ಇತ್ತೀಚಿನ ವರ್ಷಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗಿತ್ತು. ಮೇಲಿಂದ ಮೇಲೆ ಬಾಧಿಸುತ್ತಿದ್ದ ಕಟ್ಟೆರೋಗ, ಬೆಲೆಕುಸಿತ, ಹವಾಮಾನದ ವೈಪರೀತ್ಯದಿಂದಾಗಿ ಏಲಕ್ಕಿ ಬೆಳೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ಬೆಳೆಗಾರ ಅನ್ಯ ಮಾರ್ಗವಿಲ್ಲದೆ ಕಾಫಿ ಬೆಳೆಯತ್ತ ಮುಖ ಮಾಡಿದ್ದನು. ಹೀಗಾಗಿ ಏಲಕ್ಕಿ ಬೆಳೆಯುತ್ತಿದ್ದ ನೂರಾರು ಏಕರೆ ಪ್ರದೇಶ ಕಾಫಿ ತೋಟವಾಗಿ ಮಾರ್ಪಾಡಾಗಿತ್ತು.
ಜಿಲ್ಲೆಯ ಅಧಿಕ ಮಳೆ ಬೀಳುವ ಕೆಲವು ಪ್ರದೇಶಗಳಲ್ಲಿ ಕಾಫಿ ಬೆಳೆ ಬೆಳೆಯಲು ಸಾಧ್ಯವಾಗದೆ ಇರುವುದರಿಂದ ಇಲ್ಲಿನ ಬೆಳೆಗಾರರು ಈಗಲೂ ಏಲಕ್ಕಿ ಬೆಳೆಯುತ್ತಿದ್ದಾರೆ. ಕಳೆದೊಂದು ದಶಕದಿಂದಲೂ ಏಲಕ್ಕಿ ಬೆಳೆಗಾರನದ್ದು ಹೋರಾಟದ ಬದುಕಾಗಿತ್ತು. ಬೆಲೆಕುಸಿತ ಇನ್ನಿಲ್ಲದಂತೆ ಕಾಡಿತ್ತು. ಆದರೆ ಕಳೆದೊಂದು ವರ್ಷದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದುದರಿಂದ ಇಲ್ಲಿನ ಏಲಕ್ಕಿಗೆ ಹೆಚ್ಚಿನ ದರ ಲಭ್ಯವಾಗತೊಡಗಿದೆ.
ಇದೀಗ ಕೆಜಿಗೆ ಸುಮಾರು 1200ಕ್ಕೂ ಅಧಿಕ ಬೆಲೆ ದೊರೆಯುತ್ತಿದ್ದು, ಬೆಳೆಗಾರರಲ್ಲಿ ಆಶಾಭಾವನೆ ಮೂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಗ್ವಾಟೆಮಾಲದಿಂದ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ ಹರಿದು ಬರುತ್ತಿರುವುದರಿಂದಾಗಿ ಭಾರತದ ಏಲಕ್ಕಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ ಈ ಬಾರಿ ಚಂಡಮಾರುತದಿಂದಾಗಿ ಅಲ್ಲಿ ಏಲಕ್ಕಿ ಬೆಳೆ ನಾಶವಾಗಿರುವುದರಿಂದ ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದು ಜಿಲ್ಲೆಯ ಬೆಳೆಗಾರರಿಗೆ ಹೊಸ ನಿರೀಕ್ಷೆ ಮೂಡಿಸಿದೆ. ಏಲಕ್ಕಿಗೆ ದರ ಹೆಚ್ಚಳವಾಗಿದ್ದರೂ ಬೆಳೆಗಾರರ ಬಳಿ ಏಲಕ್ಕಿಯಿಲ್ಲ. ಫಸಲು ಆಗಸ್ಟ್ ವೇಳೆಗೆ ಬರಲಿದ್ದು ಅಲ್ಲಿಯ ತನಕ ಕಾಯಬೇಕಾಗಿದೆ.












Click it and Unblock the Notifications