ಅಪಘಾತಕ್ಕೀಡಾದ ವಿಮಾನ ಪೈಲಟ್ ಝೆಡ್ ಗ್ಲೂಸಿಯಾ

ಪಶ್ಚಿಮ ವಲಯದ ಐಜಿಪಿ ಗೋಪಾಲ್ ಹೊಸೂರು ಮಾತನಾಡುತ್ತಾ, ವಿಮಾನ ಅಪಘಾತದಲ್ಲಿ ಒಟ್ಟು 166 ಮಂದಿ ಮೃತಪಟ್ಟಿದ್ದಾರೆ. ಅಪಘಾತ ಸಮಯದಲ್ಲಿ ವಿಮಾನದಿಂದ ಹೊರಗೆ ಹಾರಿ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಮಾಹಿತಿ ಇದೆ ಎಂದು ಶನಿವಾರ (ಮೇ.22)ತಿಳಿಸಿದರು.
ಶವಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಇಡೀ ಜಿಲ್ಲಾಡಳಿತ ಕೈಜೋಡಿಸಿದೆ. ಕೆಎಸ್ ಆರ್ ಪಿ, ಸಿವಿಲ್ ಪೊಲೀಸ್, ಸಂಚಾರ ಪೊಲೀಸ್ ಸೇರಿದಂತೆ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ಭರದಿಂದ ಸಾಗಿದೆ . ಇದುವರೆಗೂ ಸುಟ್ಟುಕರಕಲಾದ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಂದು ಸಂಜೆಯವರೆಗೂ ರಕ್ಷಣಾ ಕಾರ್ಯ ನಡೆಯಲಿದೆ ಎಂದು ಗೋಪಾಲ್ ಹೊಸೂರು ವಿವರ ನೀಡಿದರು.
ಅಪಘಾತದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಿನ ಸೂಚನೆ ನೀಡುವವರೆಗೂ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಶವಗಳನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಹೊಸೂರು ತಿಳಿಸಿದರು.
ರನ್ ವೇಯಲ್ಲಿ ಅಪಘಾತಕ್ಕೀಡಾದ ವಿಮಾನ ಕಂದಕಕ್ಕೆ ಉರುಳಿಬಿದ್ದಿತ್ತು. ಅಗ್ನಿಶಾಮಕ ದಳ ವಿಮಾನಕ್ಕೆ ಹತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಏತನ್ಮಧ್ಯೆ ಗಾಯಗೊಂಡವರಿಗೆ ರು.50 ಸಾವಿರ ಪರಿಹಾರ ಧನವನ್ನು ಘೋಷಿಸಲಾಗಿದೆ. ಸಹಾಯವಾಣಿ ಸಂಖ್ಯೆ : 011-25603101.












Click it and Unblock the Notifications