ಹೊನ್ನಾವರ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ
ರಾಷ್ಟ್ರೀಯ ಹೆದ್ದಾರಿ 17ರ ಮೇಲಿರುವ ಚರ್ಚಿನ ಮೇಲೆ ಕಳೆದ ರಾತ್ರಿಯೇ ದಾಳಿ ನಡೆಸಲಾಗಿದೆಯಾದರೂ ಅದು ಬೆಳಕಿಗೆ ಬಂದದ್ದು ಗುರುವಾರ ಬೆಳಿಗ್ಗೆಯೇ. ಏಸು ಭಕ್ತರು ಪ್ರಾರ್ಥನೆಗೆಂದು ಚರ್ಚಿಗೆ ಬಂದಾಗ ದಾಳಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಅತ್ಯಂತ ಸುಂದರವಾಗಿ ನಿರ್ಮಿತವಾಗಿರುವ ಹೋಲಿ ಕ್ರಾಸ್ ಚರ್ಚಿಗೆ ಕ್ರೈಸ್ತರು ಮಾತ್ರವಲ್ಲ ಇತರೆ ಧರ್ಮದವರೂ ಬರುತ್ತಿದ್ದರು ಎಂದು ಸ್ಥಳೀಯ ವಾಸಿಗಳು ಹೇಳಿದ್ದಾರೆ. ಹೋಲಿ ಕ್ರಾಸ್ ಚರ್ಚು ಹೊನ್ನಾವರ ಪೊಲೀಸ್ ಠಾಣೆಯ ಎದುರಿಗೇ ಇದ್ದರೂ ದಾಳಿ ನಡೆದಿರುವ ಘಟನೆ ಯಾರ ಗಮನಕ್ಕೂ ಬಂದಿಲ್ಲ.
ದಾಳಿ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಸರ್ಕಲ್ ಇನ್ ಸ್ಪೆಕ್ಟರ್ ಎಮ್ ಜಗದೀಶ್ ತಮ್ಮ ತಂಡದೊಡನೆ ಚರ್ಚಿಗೆ ಧಾವಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಂಗಾಮಿ ಜಿಲ್ಲಾಧಿಕಾರಿ ಡಾ. ಕೆಎಮ್ ನರಸಿಂಹ ಮೂರ್ತಿ ಮತ್ತು ಭಟ್ಕಳದ ಡಿವೈಎಸ್ಪಿ ಕೂಡ ಚರ್ಚಿಗೆ ಭೇಟಿ ನೀಡಿದ್ದು, ದುಷ್ಕರ್ಮಿಗಳನ್ನು ಆದಷ್ಟು ಬೇಗ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.
ಪೊಲೀಸ್ ತುಕುಡಿಗಳು ಗ್ರಾಮ ಪಂಚಾಯಿಸಿ ಚುನಾವಣೆಯಲ್ಲಿ ಕರ್ತವ್ಯನಿರತರಾಗಿರುವುದರ ದುರ್ಲಾಭ ಪಡೆದು ದುಷ್ಕರ್ಮಿಗಳು ಚರ್ಚ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಚರ್ಚಿನ ಆಡಳಿತವರ್ಗ ಆರೋಪಿಸಿದೆ. ಘಟನೆ ನಡೆದ ನಂತರ ಸ್ಥಳದಲ್ಲಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.