ಜಾರ್ಖಂಡ್ : ಇಂದು ಬಿಜೆಪಿಗೆ ಲಾಟ್ರಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನೇತೃತ್ವದಲ್ಲಿ ಸಂಸದೀಯ ಮಂಡಳಿ ಸಭೆ ಆರಂಭವಾಗಿದ್ದು, ಸಂಜೆ ವೇಳೆಗೆ ನೂತನ ಮುಖ್ಯಮಂತ್ರಿ ಹೆಸರು ಘೋಷಣೆಯಾಗುವ ಸಾಧ್ಯತೆಗಳಿವೆ. ಜೆಎಂಎಂ ನೇತೃತ್ವದ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ರಘುಬೀರ್ ದಾಸ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕು ಎಂಬ ಮಾತು ಕೇಳಿ ಬಂದಿದೆ.
ಅದಕ್ಕೆ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಸಹಮತವೂ ಇದೆ. ಕೊನೆಯದಾಗಿ ರಘುಬೀರ್ ದಾಸ್ ಅವರನ್ನೇ ಜಾರ್ಖಂಡ್ ದ ನೂತನ ಮುಖ್ಯಮಂತ್ರಿಯಾಗಿ ನೇಮಿಸಿದರೂ ಅಚ್ಚರಿಯಿಲ್ಲ. ಆದರೆ, ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಅರ್ಜುನ್ ಮುಂಡಾ ಅವರನ್ನು ಸಿಎಂ ಗಾದಿಗೆ ತರಲು ಯತ್ನಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಶಿಬು ಸೊರೇನ್ ಅವರ ಜೆಎಂಎಂ ಹಾಗೂ ಬಿಜೆಪಿ ಸೇರಿ ಸರಕಾರ ರಚಿಸಿವೆ.
ಆದರೆ, ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಖಂಡನಾ ನಿರ್ಣಯ(ಕಟ್ ಮೋಷನ್) ನಲ್ಲಿ ಸೊರೇನ್ ಯುಪಿಎ ಪರ ಹಾಕಿದ್ದರಿಂದ ಜಾರ್ಖಂಡ್ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು. ಬಿಜೆಪಿ ಬೆಂಬಲ ಹಿಂಪಡೆಯುವುದಾಗಿ ಘೋಷಿಸಿತ್ತು. ನಂತರ ಮರುದಿನ ಬೆಂಬಲ ಮುಂದುವರಿಕೆ ಎಂದು ಘೋಷಿಸಿತು. ತೀವ್ರ ಚರ್ಚೆ, ರಾಜಕೀಯ ಲೆಕ್ಕಾಚಾರದ ನಂತರ ಜಾರ್ಖಂಡ್ ಸಿಎಂ ಸ್ಥಾನವನ್ನು ಬಿಜೆಪಿಗೆ ನೀಡಲು ಜೆಎಂಎಂ ಒಪ್ಪಿದೆ. ಜೆಎಂಎಂಗೆ ಬೆಂಬಲ ನೀಡಲು ಕಾಂಗ್ರೆಸ್ ಹಿಂದೇಟು ಹಾಕಿದ್ದರಿಂದ ಬಿಜೆಪಿಗೆ ಅಧಿಕಾರ ಸಿಕ್ಕಂತಾಗಿದೆ.












Click it and Unblock the Notifications